ಕೇರಳದಲ್ಲಿ 3 ಸ್ಥಾನ ಗೆದ್ದಿದ್ದೇವೆ, ಮುಂದೆ ಅಲ್ಲಿಯೂ ಸರ್ಕಾರ ರಚನೆ ಮಾಡುತ್ತೇವೆ: ಮೋದಿ -ಕಹಳೆ ನ್ಯೂಸ್

ಬೆಂಗಳೂರು: ಕೇರಳದಲ್ಲಿ ಈ ಬಾರಿ 3 ಸ್ಥಾನ ಗೆದ್ದಿದ್ದೇವೆ. ಮುಂದೆ ಅಲ್ಲಿಯೂ ಸರ್ಕಾರ ರಚನೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ವಿಮಾನ ನಿಲ್ದಾಣದಲ್ಲಿ ಇಂತಹ ಕಾರ್ಯಕ್ರಮ ಇದೇ ಮೊದಲು. ಬೆಂಗಳೂರಿನ (Bengaluru) ನೆಲದಲ್ಲಿ ಕೇಸರಿ ರಾರಾಜಿಸುತ್ತಿದೆ. ಬಂಗಾಳದ ಗೆಲುವು ನಿಮ್ಮ ಗೆಲುವು. 1857ರಲ್ಲಿ ಮೊದಲ ಸ್ವತಂತ್ರ ಸಂಗ್ರಾಮ ಶುರುವಾಯಿತು. ಆ ಹೋರಾಟ ದೊಡ್ಡ ಜ್ವಾಲೆ ಆಗಿ ಗುಲಾಮಗಿರಿಯ ಬೇಲಿಯನ್ನು ಕಿತ್ತು ಹಾಕಿತು ಎಂದರು.
ಕಾಂಗ್ರೆಸ್ (Congress) ನಿರಾಸೆಯಲ್ಲಿ ಮುಳುಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಿದ್ಧಾಂತ ಉಳಿದಿಲ್ಲ. ಲೋಕಕಲ್ಯಾಣ ಬಿಜೆಪಿಯ ಆದ್ಯತೆ. ಒಳ್ಳೆಯ ಸರ್ಕಾರ ನಮ್ಮ ಮಾದರಿ. 50 ಕೋಟಿ ಜನ ಬಡತನದಿಂದ ಹೊರಬಂದಿರೋದು ಇದಕ್ಕೆ ಉದಾಹರಣೆ. ಕಾಂಗ್ರೆಸ್ನ ಆಡಳಿತ ವಿರೋಧಿ ಅಲೆ ಶುರುವಾಗುತ್ತೆ. ಕಾಂಗ್ರೆಸ್ನ ಗ್ಯಾರಂಟಿಯೂ ಸುಳ್ಳು. ನಾವು ಮೂರು ವರ್ಷದಿಂದ ಕರ್ನಾಟಕದಲ್ಲಿ ನೋಡಿದ್ದೇವೆ. ಜನರ ಸಮಸ್ಯೆ ಬಗೆಹರಿಸುವ ಬದಲು ಆಂತರಿಕ ಜಗಳದಲ್ಲಿ ಮುಳುಗಿದ್ದಾರೆ. ಇಲ್ಲಿನ ಸಿಎಂ ಎಷ್ಟು ದಿನ ಉಳಿಯುತ್ತಾರೋ, ಮತ್ತೊಬ್ಬರಿಗೆ ಅವಕಾಶ ಸಿಗುತ್ತೋ ಇಲ್ಲವೋ ಎಂಬ ಚಿಂತೆಯಲ್ಲಿ ಈ ಸರ್ಕಾರ ಮುಳುಗಿದೆ. ರಾಜಸ್ಥಾನದಲ್ಲಿ ಇದೇ ಆಗಿತ್ತು. ಈಗ ಕೇರಳದಲ್ಲಿಯೂ ಅದು ನಡೆದಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
3 ದಿನದ ಹಿಂದೆ ಆಪರೇಷನ್ ಸಿಂಧೂರ ಮಾಡಿ ವರ್ಷವಾಯಿತು. ಪುದುಚೆರಿಯಲ್ಲಿ ಎರಡನೇ ಬಾರಿ ಅಸ್ಸಾಂನಲ್ಲಿ ಮೂರನೆ ಬಾರಿಗೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಸ್ಸಾಂನಲ್ಲಿ ಬಿಜೆಪಿಗೆ ದೊಡ್ಡ ಬಹುಮತ ಸಿಕ್ಕಿದೆ. ಗುಜರಾತ್ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಮಟ್ಟಿನ ಗೆಲುವು ಸಿಕ್ಕಿದೆ, ಹೊಸ ಇತಿಹಾಸ ಬರೆದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ದೇಶದಲ್ಲಿ ಬಿಜೆಪಿ ದೊಡ್ಡ ಶಕ್ತಿ ಅಲ್ಲದಿದ್ದಾಗಲು ಕರ್ನಾಟಕದಲ್ಲಿ ಬಿಜೆಪಿ ದೊಡ್ಡ ಶಕ್ತಿಯಾಗಿತ್ತು. ಆಂಧ್ರದಲ್ಲಿ ಎನ್ಡಿಎ ಸರ್ಕಾರ ಇದೆ, ತೆಲಂಗಾಣದಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿ ಇದೆ ಎಂದು ಹೇಳಿದರು.
ಕಾಂಗ್ರೆಸ್ ದೇಶದ ಅತಿ ದೊಡ್ಡ ಮಹಿಳಾ ವಿರೋಧಿ ಪಕ್ಷ. ಮಹಿಳಾ ಬಿಲ್ ಸಂಸತ್ತಲ್ಲಿ ಪಾಸ್ ಆಗಿದ್ದರೆ ಮಹಿಳೆಯರ ಶಕ್ತಿ ಹೆಚ್ಚುತ್ತಿತ್ತು. ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯ ಮಹಿಳಾ ಶಾಸಕರು, ಸಂಸದರು ಬರಬಹುದಿತ್ತು. ಕಾಂಗ್ರೆಸ್ನ ಈ ದ್ರೋಹವನ್ನು ದೇಶದ ಜನ ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಪ್ರಧಾನಿ ಮೋದಿಗೆ ಮೈಸೂರು ಪೇಟ, ಶಾಲು ಹೊದೆಸಿ ಸನ್ಮಾನ ಮಾಡಲಾಯಿತು. ಅಲ್ಲದೇ ರಾಜ್ಯ ಬಿಜೆಪಿ ನಾಯಕರು 13 ಕೆಜಿಯ ಮೋದಿಯವರ ಬೆಳ್ಳಿ ಪ್ರತಿಮೆ ನೀಡಿ ಗೌರವಿಸಿದರು.









