
ನವದೆಹಲಿ, ಡಿ.22- ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುವಲ್ಲಿ ಸಫಲವಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಗುರಿ ಸಾಧನೆ ಬಗ್ಗೆ ಚಿಂತನೆ ನಡೆಸಿದೆ.ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಜಾರಿಗೆ ಎನ್ಡಿಎ ಸರ್ಕಾರ ಮುಂದಾಗುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರೀಕ ನೋಂದಣಿ (ಎನ್ಸಿಆರ್) ಬಗ್ಗೆ ವ್ಯಾಪಕ ವಿರೋಧ ಕಂಡು ಬಂದು ದೇಶದ ವಿವಿಧೆಡೆ ಹಿಂಸಾಚಾರ ನಡೆದಿರುವ ನಡುವೆಯೇ ಮಂಗಳವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎನ್ಪಿಆರ್ ಬಗ್ಗೆ ಗಹನ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಎನ್ಪಿಆರ್ಗೆ ಒಪ್ಪಿಗೆ ದೊರೆತರೆ ಇದನ್ನು ಏಪ್ರಿಲ್ 1, 2020ರಿಂದ ಸೆಪ್ಟೆಂಬರ್ 20, 2020ರವರೆಗೆ ಈ ಪ್ರಕ್ರಿಯೆ ಕೈಗೊಳ್ಳುವ ನಿರೀಕ್ಷೆಯಿದೆ. ದೇಶದ ಪ್ರತಿ ಮನೆಗೂ ಗಣತಿದಾರರು ಬಂದು ಜನಸಂಖ್ಯೆ ನೋಂದಣಿ ಮಾಡಲಿದ್ದಾರೆ. ಬಯೋಮೆಟ್ರಿಕ್ ಸಾಧನ ಬಳಸಿ ರಾಷ್ಟ್ರದ ನಿವಾಸಿಗಳ ಗುರುತಿನ ದತ್ತಾಂಶ ಸಂಗ್ರಹಿಸಲಾಗುತ್ತದೆ.
ಈ ಪ್ರಕ್ರಿಯೆಯ ಮೂಲ ಉದ್ದೇಶವೆಂದರೆ, ದೇಶದ ಪ್ರತಿ ನಿವಾಸಿಗಳ ಸಮಗ್ರ ಗುರುತಿನ ದತ್ತಾಂಶಗಳನ್ನು ಸೃಷ್ಟಿಸುವುದಾಗಿದೆ. ದೇಶದ ಜನಗಣತಿಗೆ ಪೂರಕವಾದ ಪ್ರಕ್ರಿಯೆಯೇ ಎನ್ಪಿಆರ್, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಮೂಲಕ ದೇಶದಲ್ಲಿರುವ ಜನರ ಸಮಗ್ರ ಗುರುತಿನ ದತ್ತಾಂಶ ಸಂಗ್ರಹಿಸಲಾಗುತ್ತದೆ.
ಬಯೋಮೆಟ್ರಿಕ್ ಯಂತ್ರ ಬಳಸಿ ಜನರ ಗುರುತು ಪಡೆಯಲಾಗುತ್ತದೆ. ದೇಶದ ಯಾವುದೇ ಪ್ರದೇಶದಲ್ಲಿ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿ ವಾಸವಾಗಿರುವವರು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.















