
ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಗುತ್ತಿದ್ದಂತೆ, ಇದೀಗ ವಿಶ್ವ ಹಿಂದೂ ಪರಿಷದ್ ಹೊಸ ಮನವಿಯೊಂದನ್ನು ಸರಕಾರದ ಮುಂದಿಟ್ಟಿದೆ.
ಹೌದು, ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರ ಪೂಜಾ ಕೈಂಕರ್ಯಕ್ಕೆ ದಲಿತ ಅರ್ಚರನ್ನು ನೇಮಿಸಬೇಕು. ಈ ಮೂಲಕ ದೇಶದ ಜನರಿಗೆ ಅಖಂಡತೆಯನ್ನು ಸಾರಬೇಕು ಎಂದಿದೆ.
ಇದರೊಂದಿಗೆ ರಾಮ ಮಂದಿರ ಸರಕಾರದ ಹಣದಲ್ಲಿ ನಿರ್ಮಾಣವಾಗಬಾರದು ಬದಲಿಗೆ, ದೇಶದ ಜನರು ನೀಡುವ ದೇಣಿಗೆ ಸಂಗ್ರಹಿಸಿ ಮಂದಿರ ನಿರ್ಮಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಈ ಬಗ್ಗೆ ವಿ.ಎಚ್.ಪಿ. ವಕ್ತಾರ ವಿನೋದ್ ಬನ್ಸಾಲ್ ಮಾತನಾಡಿದ್ದು, ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಯಂತೆ ಟ್ರಸ್ಟ್ ನಿರ್ಮಾಣವಾಗಲಿ. ಇದರಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಬಳಿಕ ದಲಿತ ಅರ್ಚಕರನ್ನು ನೇಮಿಸಬೇಕು. ಇದಕ್ಕೆ ಅಗತ್ಯವಿರುವ ಪೌರೋಹಿತ್ಯವನ್ನು ಈಗಾಗಲೇ ದಲಿತರಿಗೆ ಕಲಿಸಲಾಗುತ್ತಿದೆ ಎಂದಿದ್ದಾರೆ.
ಎಲ್ಲರನ್ನೂ ಒಂದುಗೂಡಿಸಿ ರಾಮಮಂದಿರ ನಿರ್ಮಿಸಬೇಕು ಎನ್ನುವ ಕಾರಣಕ್ಕೆ, 1989ರಲ್ಲಿ ಶಂಕು ಸ್ಥಾಪನೆಯನ್ನು ದಲಿತ ಕಾರ್ಯಕರ್ತರಿಂದ ಮಾಡಿಸಲಾಗಿತ್ತು. ಇದೀಗ ದಲಿತ ಅರ್ಚಕರನ್ನು ನೇಮಿಸಬೇಕು ಎನ್ನುವ ಮಾತು ಕೇಳಿಬಂದಿದೆ.















