
ಕಾಪು: ಕಾಪು ಮತ್ತು ಉಚ್ಚಿಲ ಸಮೀಪ ಸಮುದ್ರದಲ್ಲಿ ಸಂಭವಿಸಿದ ಪ್ರತ್ಯೇಕ ಮೀನುಗಾರಿಕಾ ದೋಣಿ ಮುಳುಗಡೆ ಪ್ರಕರಣಗಳಲ್ಲಿ 21 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಬಶೀರ್ ದಾವೂದ್ ನೆಕ್ಕಿಲಾಡಿ ಅವರಿಗೆ ಸೇರಿದ ‘ಎಸ್.ಎಂ. ಫಿಶರೀಸ್’ ಬೋಟ್ ಶುಕ್ರವಾರ ಬೆಳಗ್ಗೆ ಮಂಗಳೂರು ಹಳೆ ಬಂದರಿನಿಂದ ಮೀನುಗಾರಿಕೆಗೆ ಹೊರಟಿತ್ತು. ಅಪರಾಹ್ನ 3.30ರ ವೇಳೆಗೆ ಕಾಪು ಸಮೀಪ ತಲುಪಿದಾಗ ಆಕಸ್ಮಿಕವಾಗಿ ದೋಣಿಯ ಒಳಗೆ ನೀರು ನುಗ್ಗಿತು. ಅದರಲ್ಲಿದ್ದ 9 ಮೀನುಗಾರರು ಸಮೀಪದ ಇನ್ನೊಂದು ದೋಣಿಯವರ ನೆರವು ಪಡೆದು ಅಪಾಯದಿಂದ ಪಾರಾದರು. ಎಸ್.ಎಂ. ಫಿಶರೀಸ್ ಬೋಟ್ ನೀರಿನಲ್ಲಿ ಮುಳುಗಿದೆ ಎಂದು ಮಾಲಕ ಬಶೀರ್ ದಾವೂದ್ ನೆಕ್ಕಿಲಾಡಿ ಅವರು ಮಂಗಳೂರು ಟ್ರಾಲ್ ಬೋಟ್ ಯೂನಿಯನ್ಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 30 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.










