
ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ 4ನೇ ತರಗತಿ ವಿದ್ಯಾರ್ಥಿಗಳಿಗೆ “ಜೇನು ಕೃಷಿ ಮಾಹಿತಿ ಕಾರ್ಯಗಾರ” ನಡೆಯಿತು.

ಚಲಿಸುವ ಚೌಕಟ್ಟಿನ ಪೆಟ್ಟಿಗೆಯಲ್ಲಿ ಸಾಕುವುದೇ ಜೇನು ಕೃಷಿ. ಜೇನುನೊಣದಲ್ಲಿ ನಾಲ್ಕು ವಿಧಗಳಿವೆ. ತುಡುವೆ ನೊಣವನ್ನು ಮಾತ್ರ ಪೆಟ್ಟಿಗೆಯಲ್ಲಿ ಸಾಕುತ್ತಾರೆ. ಜೇನುನೊಣ ಪಕೃತಿಯಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತದೆ.

ಜೇನುನೊಣಗಳಿಲ್ಲದೆ ಪರಾಗಸ್ಪರ್ಶ ಸಾಧ್ಯವಿಲ್ಲ, ಜೇನು ಸಂತತಿ ನಾಶ ಆದರೆ ಉತ್ಪಾದನೆ ಕಡಿಮೆಯಾಗಿ ಮನುಷ್ಯ ಸಂತತಿ ಕೂಡ ನಾಶ ಆಗುತ್ತದೆ. ಆದ್ದರಿಂದ ಜೇನು ಉಳಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದು ದೂರವಾಣಿ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಹಾಗೂ ಪ್ರಗತಿಪರ ಕೃಷಿಕರೂ ಆದ ರಾಕೋಡಿ ಈಶ್ವರ ಭಟ್ರವರು ವಿವರಿಸಿದರು.

4ನೇ ತರಗತಿಯ ಪರಿಸರ ಅಧ್ಯಯನ ವಿಷಯದ “ಸವಿಜೇನು” ಪಾಠಕ್ಕೆ ಸಂಬಂಧಿಸಿದಂತೆ ಜೇನು ಸಾಕಣೆ ಹೇಗೆ ಮಾಡುವುದು, ಯಾವ ಜೇನಿನಿಂದ ಜೇನು ಕೃಷಿ ಮಾಡುವುದು, ಅದರಿಂದಾಗುವ ಲಾಭ ಇತ್ಯಾದಿ ವಿಷಯದ ಕುರಿತಾದ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ಜೇನು ಕೃಷಿಯ ಕುರಿತಾದ ತಮ್ಮ ಸಂಶಯಗಳನ್ನು ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಶಾಲಾ ಮುಖ್ಯಗುರುಗಳಾದ ರವಿರಾಜ ಕಣಂತೂರು ಉಪಸ್ಥಿತರಿದ್ದರು. ಈ ಕಾರ್ಯಗಾರದಲ್ಲಿ 4ನೇ ತರಗತಿಯ 159 ವಿದ್ಯಾರ್ಥಿಗಳು, ಅಧ್ಯಾಪಕ ವೃಂದದವರು ಭಾಗವಹಿಸಿದ್ದರು. ಅಧ್ಯಾಪಕರಾದ ಶ್ರೀಮತಿ ರೂಪಕಲಾ ಸ್ವಾಗತಿಸಿ, ಶ್ರೀಮತಿ ಚೈತ್ರ ಎನ್ ಕೆ ವಂದಿಸಿದರು.









