
ಚಾಮರಾಜನಗರ: ಕಾಡಾನೆ ದಾಳಿಯಲ್ಲಿ ಮಹಿಳೆ ಸಾವನ್ನಪ್ಪಿ ನಾಲ್ಕು ವರ್ಷದ ಹೆಣ್ಣು ಮಗು ಅಚ್ಚರಿ ರೀತಿಯಲ್ಲಿ ಪಾರಾಗಿರುವ ಘಟನೆ ಯಳಂದೂರಿನ ದೊಡ್ಡಾಣೆ ಬೆಟ್ಟದ ಬಳಿ ನಡೆದಿದೆ. ಹಳೆಯೂರು ಗ್ರಾಮದ ಗೌರಮ್ಮ (35) ಮೃತ ಮಹಿಳೆಯಾಗಿದ್ದು, ಆಕೆಯ ಬಳಿಯಿದ್ದ ಮಗು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಮೀನಿಗೆ ತೆರಳಿ ವಾಪಸಾಗುವಾಗ ಎದುರಿಗೆ ಬಂದ ಆನೆಯನ್ನು ನೋಡಿ ಗೌರಮ್ಮ ಗಾಬರಿಗೊಂಡಿದ್ದಾರೆ.
ಅಲ್ಲಿಂದ ತಪ್ಪಿಸಿಕೊಳ್ಳಲು ಓಡುವಾಗ ಎಡವಿದ್ದಾರೆ. ಅಪಾಯ ಅರಿತು ಮಗುವನ್ನು ಪಕ್ಕಕ್ಕೆ ಎಸೆದಿದ್ದಾರೆ. ಅಷ್ಟರಲ್ಲಿ ಆನೆ ಆಕೆಯನ್ನು ಕಾಲಿನಿಂದ ಒದ್ದು ಸೊಂಡಿಲಿನಿಂದ ಎತ್ತಿ ಎಸೆದಿದೆ. ತೀವ್ರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಬೇಲಿಗಿಡದ ಬಳಿ ಮಗುವಿನ ಅಳು ಕೇಳಿ ದಾರಿಯಲ್ಲಿ ಹೋಗುತ್ತಿದ್ದ ಗ್ರಾಮಸ್ಥರೊಬ್ಬರು ಆನೆಯನ್ನು ನೋಡಿ ಏನೋ ಅಚಾತುರ್ಯ ನಡೆದಿರುವುದನ್ನು ತಿಳಿದು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.ಸ್ಥಳಕ್ಕೆ ದಾವಿಸಿದ ಅರಣ್ಯ ಸಿಬ್ಬಂದಿ ಮಹಿಳೆ ದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.














