
ಬಂಟ್ವಾಳ: ಶಾಸಕ ಎಂಬುದು ಹುದ್ದೆಯಲ್ಲ, ಜನರ ಧ್ವನಿ, ನಾನು ನಿಮ್ಮ ಸೇವಕ, ಕಾನೂನುಬದ್ಧವಾಗಿ ಸರಕಾರದ ಸವಲತ್ತುಗಳಿಂದ ವಂಚಿತರಾದವರಿಗೆ ನ್ಯಾಯ ಒದಗಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಈ ಉದ್ದೇಶದಿಂದ ಗ್ರಾಮ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಅವರು ಅನಂತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕರಿಂಕ ದುರ್ಗಾಪರಮೇಶ್ವರಿ ಶ್ರೀದೇವಿ ಕಲ್ಯಾಣ ಮಂಟಪದಲ್ಲಿ ನಡೆದ “ಗ್ರಾಮದ ಕಡೆ ಶಾಸಕರ ನಡೆ” ಗ್ರಾಮ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿದು ಬಗೆಹರಿಸಲು ಗ್ರಾಮದ ಕಡೆಗೆ ನಾನೇ ಬಂದಿದ್ದೇನೆ. ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ ಎಂದು ಅವರು ತಿಳಿಸಿದರು.
ಅಹವಾಲು ಸ್ವೀಕರಿಸದ ಸಂದರ್ಭದಲ್ಲಿ ವಿಕಲಾಂಗ ಮೂರು ಜನ ಮಕ್ಕಳ ತಾಯಿಯೋರ್ವರಿಗೆ ಸಹಿತ ಅನೇಕ ಫಲಾನುಭವಿಗಳಿಗೆ 94 ಸಿ. ಹಕ್ಕುಪತ್ರ ನೀಡದ ದೂರಿನ ಹಿನ್ನೆಲೆ ಗರಂ ಆದ ಅವರು ಗ್ರಾಮ ಕರಣೀಕ ಹಾಗೂ ಕಂದಾಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ವಾರದೊಳಗೆ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.
ವಿಧವಾ ವೇತನ ಸಹಿತ ಅನೇಕ ಸರಕಾರಿ ಯೋಜನೆಗಳು ಇಲ್ಲಿನ ಗ್ರಾಮ ಕರಣೀಕರಿಂದ ಅಗುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂತು. ಈ ಗ್ರಾಮ ಕರಣೀಕರನ್ನು ಪ್ರಶ್ನಿಸಿದ ಶಾಸಕರು ಸರಕಾರಿ ಕೆಲಸ ಸರಿಯಾಗಿ ಮಾಡಿ, ಈ ರೀತಿಯಲ್ಲಿ ಜನರಿಂದ ದೂರುಗಳು ಬಂದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಗ್ಯಾಸ್ ವಿತರಣೆಯನ್ನು ಶಾಸಕರು ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ರಸ್ತೆ, ಕಾಲುಸಂಕ, ಹೈ ಮಾಸ್ಕ್ ವಿದ್ಯುತ್ ದೀಪ ಹೀಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ಗ್ರಾಮ ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಜಿ.ಪಂ.ಸದಸ್ಯೆ ಕಮಲಾಕ್ಷೀ ಕೆ.ಪೂಜಾರಿ, ತಾಲೂಕು ಪಂಚಾಯತ್ ಸದಸ್ಯೆ ಗೀತಾ ಚಂದ್ರಶೇಖರ್, ಗ್ರಾಮ ಪಂಚಾಯತ್ ಅಧ್ಯಕ್ಷ ಸನತ್ ಕುಮಾರ್ ರೈ, ಉಪಾಧ್ಯಕ್ಷೆ ಕವಿತಾ ಉಮೇಶ್ ಪೂಜಾರಿ, ಸದಸ್ಯರಾದ ವಸಂತ ಗೌಡ, ಸುಮಿತ್ರ, ಸುಜಾತ, ವಸಂತಿ, ಪುರಂದರ ಗೌಡ, ಪಿ.ಡಿ.ಒ. ಜಯರಾಮ, ಡೆಪ್ಯೂಟಿ ತಹಶೀಲ್ದಾರ ರವಿಶಂಕರ್ ಕಂದಾಯ ನಿರೀಕ್ಷಕ ದಿವಾಕರ, ಗ್ರಾಮ ಕರಣೀಕ ಲಿಂಗಪ್ಪ, ಜಿ.ಪಂ.ಇಂಜಿನಿಯರಿಂಗ್ ನಾಗೇಶ್ ವಿಟ್ಲ, ಮೆಸ್ಕಾಂ ಜೆ.ಇ. ಕುಶಾಲಪ್ಪ, ವೈದ್ಯಾಧಿಕಾರಿ ಶಶಿಕಲಾ, ಬಿಜೆಪಿ ಪ್ರಮುಖರಾದ ದೇವದಾಸ ಶೆಟ್ಟಿ, ಚೆನ್ನಪ್ಪ ಆರ್.ಕೋಟ್ಯಾನ್, ತನಿಯಪ್ಪ ಗೌಡ, ಚಂದ್ರಶೇಖರ್ ಕರ್ಕೇರ, ಗಣೇಶ್ ಪೂಜಾರಿ, ಚಂದ್ರಶೇಖರ್ ಪೂಜಾರಿ, ನಾಗೇಶ್ ಭಂಡಾರಿ, ದಿನೇಶ್ ಪಿಲಿಚಾಂಡಿಗುಡ್ಡೆ, ಜಯರಾಮ ಆಚಾರ್ಯ, ಕುಶಲ ಬಾಳ್ತಿಲ, ಗಣೇಶ್ ರೈ ಮಾಣಿ, ಪುರುಷೋತ್ತಮ ವಾಮದಪದವು, ಬಾಲಕೃಷ್ಣ ಸೆರ್ಕಳ ಮತ್ತಿತರರು ಉಪಸ್ಥಿತರಿದ್ದರು.










