
ರಾಯಚೂರು: ‘ಯಶೋಮಾರ್ಗ’ ರಾಕಿಂಗ್ ಸ್ಟಾರ್ ಯಶ್ ರೈತರು, ಬಡವರ ಏಳಿಗೆಗಾಗಿ ನಿರ್ಮಾಣ ಮಾಡಿದ ಸಂಸ್ಥೆ. ವರ್ಷದ ಹಿಂದೆ ರಾಜ್ಯದಲ್ಲಿ ನೀರಿಲ್ಲದೆ ಹನಿ ನೀರಿಗಾಗಿ ಜನರು ಪರದಾಡುತ್ತಿದ್ದ ಸಮಯದಲ್ಲಿ ಹುಟ್ಟುಕೊಂಡ ಸಂಸ್ಥೆ. ತೆರೆ ಮೇಲೆ ಮಾತ್ರ ರಂಜಿಸುವುದಷ್ಟೇ ನಮ್ಮ ಕೆಲಸವಲ್ಲ ಅನ್ನೋ ಯಶ್ ರೈತರ ಸಮಸ್ಯೆಗಳು, ಪರಿಸರ ಕಾಳಜಿ ಸೇರಿದಂತೆ ನೊಂದವರ ಬಾಳಿಗೆ ಬೆಳಕಾಗಿ ಹಲವು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನ ಗುರುತಿಸಿಕೊಳ್ತಾರೆ.

ರಾಯಚೂರಿನಲ್ಲಿ ಟ್ಯಾಂಕರ್ನಿಂದ ನೀರು ಪೂರೈಕೆ..!
ರಾಜ್ಯ ಸೇರಿದಂತೆ ಎಲ್ಲೆಡೆ ಬಿರು ಬಿಸಿಲಿನಿಂದಾಗಿ ನದಿಯ ನೀರಿನ ಮಟ್ಟ ಕುಸಿದಿದೆ. ಅಲ್ದೇ ಜನರು, ದನಕರುಗಳು, ಪ್ರಾಣಿ- ಪಕ್ಷಿಗಳಿಗೆ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಈ ನಡುವೆ ರಾಕಿಭಾಯ್ ಸಂಸ್ಥೆ ‘ಯಶೋಮಾರ್ಗ’ದ ಮೂಲಕ ಬರದ ನಾಡು ರಾಯಚೂರಿನ ಹಳ್ಳಿಗಳಿಗೆ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡ್ತಿದೆ. ಈ ಮೂಲಕ ತಮ್ಮ ಸಾಮಾಜಿಕ ಸೇವೆಯನ್ನು ಯಶ್ ಮೆರೆಯುತ್ತಿದ್ದಾರೆ. ರೈತರ ಕಷ್ಟಗಳನ್ನು ಅರಿತು ಅವರ ಸಮಸ್ಯೆಗಳಿಗೆ ಬೆಂಗಾವಲಾಗಿ ನಿಲ್ಲೋ ಯಶ್ ಕಳೆದ ವರ್ಷಗಳ ಹಿಂದೆ ಕೆಲ ಹಳ್ಳಿಗಳ ಕೆರೆಯನ್ನು ಹೂಳೆತ್ತಿಸಿದ್ರು. ಅಲ್ಲದೇ ರೈತರ ಪ್ರತಿ ಬೆಳೆಗೂ ಸೂಕ್ತ ಬೆಂಬಲ ಬೆಲೆ ಸಿಗುವಂತೆ ರೈತರ ಪರವಾಗಿ ಧ್ವನಿಯಾಗಿದ್ರು. ಇದೀಗ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡೋ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.









