ಶ್ರೀ ಶಾರದಾ ಪ್ರೌಢಶಾಲೆ ಪಾಣೆಮಂಗಳೂರು ಉಚಿತ ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಶಾರದಾ ಪ್ರೌಢಶಾಲೆ ಪಾಣೆಮಂಗಳೂರು ಇಲ್ಲಿ ಜೂನ್ 8 ಸೋಮವಾರದಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಮತ್ತು ಗೆಟಿಕ್ಸ್ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿತು.
ಆಕಾಂಕ್ಷ ಚಾರಿಟೇಬಲ್ ಟ್ರಸ್ಟಿನ ಪ್ರತಿನಿಧಿ ಹೇಮಂತ್ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ ವಿದ್ಯಾರ್ಥಿಗಳು ಛಲ, ದೃಢಸಂಕಲ್ಪ, ಶಿಸ್ತು, ಸಂಯಮ , ಮತ್ತು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಕಲಿಕೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಂಡು, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು ಎಂದರು. ಹಾಗೂ ಮುಂದಿನ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ನೋಟ್ ಪುಸ್ತಕಗಳ ಜೊತೆಗೆ ಉಚಿತ ಬ್ಯಾಗ್ ಅನ್ನು ವಿತರಿಸುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ 2025-26 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ 603 ಅಂಕಗಳನ್ನು ಪಡೆದ ಕು. ಶ್ರಾವ್ಯ ಳನ್ನು ಗೌರವಿಸಿ ಸನ್ಮಾನಿಸಲಾಯಿತು. ಪಾಣೆಮಂಗಳೂರು ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ನರೇಂದ್ರನಾಥ ಕುಡ್ವ, ಶ್ರೀ ಶಾರದಾ ಪ್ರೌಢಶಾಲೆಯ ಸಂಚಾಲಕರಾದ ಡಾ.ಪಿ. ವಿಶ್ವನಾಥ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶಿವಪ್ಪ ನಾಯಕ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ವೀಣಾ ವಂದಿಸಿ, ಸುಧಾಕರ್ ಆಕಾಂಕ್ಷ ಚಾರಿಟೇಬಲ್ ಟ್ರಸ್ಟಿನ ಕುರಿತು ಪರಿಚಯಿಸಿ, ಶಿಕ್ಷಕಿ ತೇಜಸ್ವಿನಿ ಸನ್ಮಾನ ಪತ್ರ ಪಾಚಿಸಿ , ಶಿಕ್ಷಕ ಧನರಾಜ್ ಡಿ ಆರ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕರು ಸಹಕರಿಸಿದರು.











