ಹಾರ್ಟ್ ಅಟ್ಯಾಕ್ ಅಲ್ಲ, ಪತ್ನಿಯಿಂದ ಕೊಲೆ ಎಂದ ಸಹೋದರ: ಹೂತಿಟ್ಟ ಶವ ಹೊರತೆಗೆದು ಮರು ತನಿಖೆ -ಕಹಳೆ ನ್ಯೂಸ್

ಬೆಂಗಳೂರು: ನನ್ನ ಸಹೋದರನ ಸಾವಿಗೆ ಆತನ ಪತ್ನಿಯೇ ಕಾರಣವಾಗಿದ್ದು, ಇದು ಹಾರ್ಡ್ ಅಟ್ಯಾಕ್ ಅಲ್ಲ ಕೊಲೆ ಅಂತಾ ಬಂದ ದೂರು ಆಧರಿಸಿ, ಮರು ತನಿಖೆಗೆ ಇಳಿದ ಪೊಲೀಸರು ಬರೋಬ್ಬರಿ 6 ತಿಂಗಳ ಬಳಿಕ ತಹಶೀಲ್ದಾರ್ ಸಮ್ಮುಖದಲ್ಲಿ ಹೂತಿಟ್ಟ ಶವ ಹೊರತೆಗೆದಿದ್ದಾರೆ.
ಬೆಂಗಳೂರು ನಗರದ HAL ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ತಿಂಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದ ಇಂತಿಯಾಜ್ ಪಾಷಾ ಶವವನ್ನು ಇಂದು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಸಹೋದರ ದೂರು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಲಾಗಿದ್ದು, ಮೃತದೇಹವನ್ನು ಹೊರತೆಗೆಯಲಾಗಿದೆ. ಸುಮಾರು ಆರು ತಿಂಗಳ ಹಿಂದೆ ಇಂತಿಯಾಜ್ ಪಾಷಾ ತಮ್ಮ ಮನೆಯಲ್ಲಿ ಮೃತಪಟ್ಟಿದ್ದರು. ಆಗ ಅವರ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಆದರೆ, ಇಂತಿಯಾಜ್ ಪಾಷಾ ಪತ್ನಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದ್ದು, ಆತನನ್ನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆಳವಣಿಗೆಯಿಂದ ಅನುಮಾನಗೊಂಡ ಇಂತಿಯಾಜ್ ಸಹೋದರ, ತಮ್ಮ ಸಹೋದರನ ಪತ್ನಿ ಮತ್ತು ಆಕೆಯ ಸ್ನೇಹಿತನ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.











