Friday, April 24, 2026
ಸುದ್ದಿ

ಕರಾವಳಿಯ ಹೈನುಗಾರರಿಗೆ ಸಿಗದ “ಅನುಗ್ರಹ’ ಸರಕಾರ ನೀಡುವ ಮೊತ್ತ ಅತ್ಯಲ್ಪ; 282 ಹಸುಗಳಿಗೆ ಪರಿಹಾರ ಧನ ಬಾಕಿ- ಕಹಳೆ ನ್ಯೂಸ್

ಜಾನುವಾರುಗಳು ರೋಗ ರುಜಿನಗಳಿಗೆ ಒಳಗಾಗಿ ಸಾವನ್ನಪ್ಪಿದರೆ ಪರಿಹಾರ ನೀಡುವ ರಾಜ್ಯ ಸರಕಾರದ ಅನುಗ್ರಹ ಯೋಜನೆಯಡಿ ಕರಾವಳಿಯ 282 ಹಸುಗಳಿಗೆ ಪರಿಹಾರ ಧನ ಇನ್ನೂ ಬಾಕಿ ಉಳಿದುಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷಗಳಲ್ಲಿ 373 ಹಸುಗಳು ಸಾವನ್ನಪ್ಪಿದ್ದವು. ಇದರಲ್ಲಿ 213 ಹಸುಗಳ ಪರಿಹಾರ ಬಂದಿದ್ದು, 160 ಬಾಕಿ ಉಳಿದುಕೊಂಡಿದೆ. ಅದೇ ರೀತಿ, ಉಡುಪಿ ಜಿಲ್ಲೆಯಲ್ಲಿ ಸಾವಿಗೀಡಾದ 338 ದನಗಳ ಪೈಕಿ 216 ದನಗಳಿಗೆ ಮಾತ್ರ ಪರಿಹಾರ ನೀಡಲಾಗಿದ್ದು, 122 ದನಗಳ ಪರಿಹಾರ ಧನ ಬಿಡುಗಡೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಾವನ್ನಪ್ಪಿದ ದನಕ್ಕೆ ವಿಮೆ ಇಲ್ಲದಿದ್ದರೆ ಅನುಗ್ರಹ ಯೋಜನೆ ವ್ಯಾಪ್ತಿಗೆ ಬರುತ್ತದೆ. ಸತ್ತ ದನವನ್ನು ಪೋಸ್ಟ್ ಮಾರ್ಟಂ ಮಾಡಿದ ಬಳಿಕ ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತ್‌ನಲ್ಲಿರುವ ಪಶು ಸಖೀಯರ ಮೂಲಕ ರೈತರು ಅರ್ಜಿ ನೀಡಬೇಕು. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಈ ಬಗ್ಗೆ ಆಸಕ್ತಿ ತುಸು ಕಡಿಮೆ ಇದೆ. 30-50 ಸಾವಿರ ರೂ. ಬೆಲೆಬಾಳುವ ರಾಸುಗಳಿಗೆ ಈ ಯೋಜನೆಯಡಿ ಸಿಗುವ ಪರಿಹಾರ ಅಲ್ಪ ಮೊತ್ತದ್ದಾಗಿರುವುದು ಕರಾವಳಿಯ ಹೈನುಗಾರರ ನಿರಾಸಕ್ತಿಗೆ ಒಂದು ಕಾರಣ. ಪಶುವೈದ್ಯರು ಮೃತ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಬೇಕಿದ್ದು, ಇದಕ್ಕೆ ಹಸುಗಳ ಬಗ್ಗೆ ಭಾವನಾತ್ಮಕ ಸಂಬಂಧ ಇರಿಸಿಕೊಂಡಿರುವ ಅನೇಕ ಹೈನುಗಾರರು ಒಪ್ಪದಿರುವುದು ಇನ್ನೊಂದು ಕಾರಣ.

2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ ಸಮಯದಲ್ಲಿ ಅನುಗ್ರಹ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆರಂಭದ ಕೆಲವು ವರ್ಷ ಯೋಜನೆ ಉತ್ತಮವಾಗಿ ನಡೆಯಿತು. ಬಳಿಕ ಯೋಜನೆ ವೇಗ ಕಳೆದುಕೊಂಡಿತು. ಬಳಿಕ ಬಂದ ಬಿಜೆಪಿ ಸರಕಾರದ ಅವಧಿಯಲ್ಲೂ ಈ ಯೋಜನೆ ಮುನ್ನಡೆಯಿತು. ಕಳೆದ ಬಜೆಟ್‌ನಲ್ಲಿ ಈ ಯೋಜನೆಯ ಮೊತ್ತವನ್ನು 10,000 ರೂ.ನಿಂದ 15,000 ರೂ.ಗೆ ಏರಿಕೆ ಮಾಡಲಾಗಿತ್ತು. ಆದರೆ ಯೋಜನೆಯ ಪರಿಹಾರ ಮೊತ್ತ ಬಿಡುಗಡೆಗೆ ರಾಜ್ಯ ಸರಕಾರ ಆಸಕ್ತಿ ತೋರುತ್ತಿಲ್ಲ ಎನ್ನುತ್ತಾರೆ ರೈತರು.

3ರಾಜ್ಯ ಸರಕಾರದ ಅನುಗ್ರಹ ಯೋಜನೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿಯೂ ಅನುಷ್ಠಾನದಲ್ಲಿದೆ. ದನ ಸಾವನ್ನಪ್ಪಿದರೆ ಈ ಯೋಜನೆಗೆ ಅರ್ಜಿ ಹಾಕುವ ಮೂಲಕ 15,000 ರೂ.ವರೆಗೆ ಪರಿಹಾರ ಧನ ಪಡೆದುಕೊಳ್ಳಬಹುದು. ಜಿಲ್ಲೆಯಲ್ಲಿ ಬಾಕಿ ಇರುವ ಪರಿಹಾರ ಸದ್ಯದಲ್ಲೇ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.