
ಬೆಂಗಳೂರು : ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ಕರಾವಳಿ ಜಿಲ್ಲೆಗಳು ಹಾಗೂ ಒಳನಾಡಿನ ಜಿಲ್ಲೆಗಳಾದ್ಯಂತ ಆಗಾಗ ಭಾರೀ ಮಳೆ ಆಗುತ್ತಿದೆ. ಗುಡುಗು ಸಹಿತ ಅತ್ಯಧಿಕ ಮಳೆ ಆರ್ಭಟ ಇಂದಿನಿಂದ ಮುಂದಿನ 05 ದಿನಗಳವರೆಗೆ (ಮೇ 23) ಕಂಡು ಬರಲಿದೆ.
ಇದರಲ್ಲಿ ಮುಂದಿನ ಎರಡು ದಿನ ಬಿರುಗಾಳಿ ಸಹಿತ ಮಳೆ ಆಗಲಿದೆ. 03 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’, 15 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಚಂಡಮಾರುತ ವೈಪರೀತ್ಯದ ಪ್ರಭಾವದಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಬಹುತೇಕ ಒಳನಾಡು ಜಿಲ್ಲೆಗಳ ಪ್ರದೇಶಗಳಲ್ಲಿ ಪೂರ್ವ ಮುಂಗಾರು ಮಳೆ ಹೆಚ್ಚು ಸಕ್ರಿಯವಾಗಿದೆ. ರಾಜ್ಯದ ವಿವಿಧೆಡೆ ಜೋರು ಮಳೆ ದಾಖಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಅವಾಂತರ ಸೃಷ್ಟಿಸುತ್ತಿದೆ. ಮಳೆ ಹಾನಿ ಉಂಟಾಗಿದೆ. ಮುಂದಿನ 05 ದಿನಗಳಲ್ಲಿ ಒಂದೊಂದು ದಿನ ಒಂದೊಂದು ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಖಚಿತಪಡಿಸಿದ್ದಾರೆ.
200 ಮಿ.ಮೀ.ಗೂ ಹೆಚ್ಚು ಮಳೆ: ರೆಡ್ ಅಲರ್ಟ್
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೇ 21 ರಂದು ಅತೀ ಹೆಚ್ಚು ಮಳೆ ಅಂದರೆ ಗರಿಷ್ಠ 200 ಮಿಲಿ ಮೀಟರ್ ಗೂ ಹೆಚ್ಚು ಮಳೆ ಬರಲಿರುವ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.
ಇನ್ನೂ ಮೇ 21ರವರೆಗೆ ಕರಾವಳಿ ಈ ಜಿಲ್ಲೆಗಳು ಸೇರಿದಂತೆ ಬೆಳಗಾವಿ, ಬಾಗಲಕೋಟ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಿದೆ.
ನಂತರ ಮೇ 23ರವರೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ಬರಲಿದ್ದು, ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಇದೇ ಅವಧಿಯಲ್ಲಿ ಒಳನಾಡಿನ ಇತರ ಜಿಲ್ಲೆಗಳಿಗೆ ಪ್ರತ್ಯೇಕ ದಿನಗಳಂದು ಸಾಧಾರಣದಿಂದ ಭಾರೀ ಮಳೆ ಪ್ರಯುಕ್ತ ‘ಯೆಲ್ಲೋ ಅಲರ್ಟ್’ ಕೊಡಲಾಗಿದೆ.
ಮುಂಗಾರು ಮಳೆ ಅಪ್ಡೇಟ್
ಒಟ್ಟಾರೆ ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಭರ್ಜರಿ ಮಳೆ ಆಗಲಿದೆ. ಕಳೆದೊಂದು ವಾರದಿಂದ ಒಣಹವೆಯ ಪ್ರದೇಶಗಳಾದ ಉತ್ತರ ಒಳನಾಡಿನ ಭಾಗದಲ್ಲೂ ಅಲ್ಲಲ್ಲಿ ವರುಣಾರ್ಭಟ ಕಂಡು ಬರುತ್ತಿದೆ. ಒಣಹವೆ ಜೊತೆಗೆ ಅಲ್ಲಲ್ಲಿ ಜೋರು ಮಳೆ ಆಗುತ್ತಿದೆ. ಮುಂಗಾರು ಬಿತ್ತನೆಗೆ ಸಜ್ಜಾಗಿರುವ ರಾಜ್ಯದ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ. ಈ ತಿಂಗಳಾಂತ್ಯಕ್ಕೆ (ಮೇ 27) ಮುಂಗಾರು ಮಳೆ ಸುರಿಸುವ ಮೋಡಗಳು ಕೇರಳ ಮಾರ್ಗವಾಗಿ ದೇಶ ಆಗಮಿಸಬಹುದೆಂದು ಹವಾಮಾನ ತಜ್ಞರು ಊಹಿಸಿದ್ದಾರೆ. ಈ ವರ್ಷ ಉತ್ತಮ ಮಳೆ ಆಗಲಿದೆ ಎಂದು ಈಗಾಗಲೇ IMD ಮುನ್ಸೂಚನೆ ನೀಡಿದೆ.
ಚಂಡಮಾರುತ ಪ್ರಸರಣದ ಪ್ರಭಾವ: ಭಾರೀ ಮಳೆ
ತಮಿಳುನಾಡು ಕರಾವಳಿ ಭಾಗದ ಬಂಗಾಳಕೊಲ್ಲಿ ಸಮುದ್ರದಲ್ಲಿ ಮೇಲ್ಮೈನಲ್ಲಿ ಹಾಗೂ ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಚಂಡಮಾರುತ ಪ್ರಸರಣ ಸೃಷ್ಟಿಯಾಗಿದೆ. ಇಲ್ಲಿನ ಬೀಸುವ ಗಾಳಿಯು ಭೂ ಮೇಲ್ಮೈ ಮೇಲೆ ಪ್ರಭಾವ ಬೀರುತ್ತಿದೆ. ಇರಿಂದಾಗಿ ಮಳೆ ಸುರಿಸುವ ಮಾರುತಗಳು ಸಕ್ರಿಯವಾಗಿವೆ. ರಾಜ್ಯದ ಕರಾವಳಿ ಹಾಗೂ ಒಳನಾಡು ಭಾಗದಲ್ಲಿ ಪ್ರತಿ ಗಂಟೆಗೆ ಗಾಳಿ ವೇಗ 30-40 ಕಿಲೋ ಮೀಡರ್ ವೇಗದಲ್ಲಿ ಬೀಸುತ್ತಿದೆ. ಕೆಲವೊಮ್ಮೆ ಈ ಗಾಳಿಯ ವೇಗ ಗಂಟೆಗೆ 50ಕಿಲೋ ಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯು ಇದೆ.
ರಾಜ್ಯದ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೆಲವೆಡೆ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಕಂಡು ಬಂದರೂ ಸಹಿತ ಸಂಜೆ ಆಗುತ್ತಿದ್ದಂತೆ ಮಬ್ಬು ಕವಿದು ಇನ್ನಿಲ್ಲದಂತೆ ಮಳೆ ಸುರಿಯುತ್ತಿರುವುದು ಕಂಡು ಬಂದಿದೆ.













