
ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ವ್ಯಕ್ತಿಯ ಆಟೋ ರಿಕ್ಷಾವನ್ನೇ ಹಾಡು ಹಗಲೇ ಕಳ್ಳರು ಕದ್ದೊಯ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿ ರೋಡಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕಚೇರಿ ಮುಂಭಾಗ 400ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ರೈತಸಂಘ ಪ್ರತಿಭಟನೆಯನ್ನ ಆಯೋಜಿಸಿತ್ತು. ಬೆಳಗ್ಗೆ 10.30ರ ವೇಳೆ ಬಿಸಿ ರೋಡಿನ ಲಯನ್ಸ್ ಕ್ಲಬ್ ಭವನದ ಹತ್ತಿರ ತಮ್ಮ ಅಟೋ ರಿಕ್ಷಾವನ್ನು ನಿಲ್ಲಿಸಿ, ರೈತರೊಬ್ಬರು ಪ್ರತಿಭಟನೆಗೆ ತೆರಳಿದ್ದಾರೆ. ಪ್ರತಿಭಟನೆ ಮುಗಿಸಿ ಆಟೋ ನಿಲ್ಲಿಸಿದ್ದ ಸ್ಧಳಕ್ಕೆ ಬಂದಾಗ ಆಟೋ ಇರಲಿಲ್ಲ. ಹೀಗಾಗಿ ಯಾರೋ ಕಳ್ಳರು ಅಟೋ ರಿಕ್ಷಾ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಸಂಶಯ ವ್ಯಕ್ತವಾಗಿದೆ. ಈ ಕುರಿತು ವಿಟ್ಲದ ಯೋಗೀಶ್ ಕುಮಾರ್ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.















