ಪ್ರತಿನಿತ್ಯದ ದಾರಿ ಬಿಟ್ಟು ಬೇರೆ ದಾರಿ ಹಿಡಿದಿದ್ದ.! ಪುತ್ತೂರು ಬೊಳುವಾರು ಅಪಾರ್ಟ್ಮೆಂಟ್ ನಿಂದ ಬಿದ್ದು ಸುಶಾನ್ ಸಾವು ; ಸುದಾನ ಪ್ರೌಢಶಾಲೆಯ ವಿದ್ಯಾರ್ಥಿ ಸಾವಿನ ಬಗ್ಗೆ ಸಮಗ್ರ ತನಿಖೆಗೆ ತಂದೆಯಿಂದ ದೂರು – ಕಹಳೆ ನ್ಯೂಸ್
ಪುತ್ತೂರು, ಆ 08 : ಬೊಳುವಾರು ಅಪಾರ್ಟ್ಮೆಂಟ್ ಕಟ್ಟಡದ ಮಹಡಿಯಿಂದ ಬಿದ್ದು ಮೃತಪಟ್ಟ ವಿದ್ಯಾರ್ಥಿ ಸುಶಾನ್ ರೈ ಅವರ ಅಂತ್ಯಕ್ರಿಯೆ ಪುತ್ತೂರು ಮಡಿವಾಳಕಟ್ಟೆ ಸ್ಮಶಾನದಲ್ಲಿ ಆ. 6ರ ಸಂಜೆ ನಡೆಯಿತು.
ಸುದಾನ ವಸತಿಯುತ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಶಾನ್ ರೈ ಸಾವಿನ ಬಗ್ಗೆಸಮಗ್ರ ತನಿಖೆ ನಡೆಸುವಂತೆ ತಂದೆ ಮನೋಹರ್ ರೈ ಪೊಲೀಸರಿಗೆ ದೂರು ನೀಡಿದ್ದಾರೆ.ಸುದಾನ ವಸತಿಯುತ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ ಆ. 5ರ ಸಂಜೆ ಬೊಳುವಾರು ಅಪಾರ್ಟ್ಮೆಂಟ್ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ತತ್ಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದರು. ಮೃತ ಸುಶಾನ್ ರೈಯವರ ತಂದೆ ಮನೋಹರ್ ರೈಯವರು ನೀಡಿದ ದೂರಿನಂತೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತಿನಿತ್ಯದ ದಾರಿ ಬಿಟ್ಟು ಬೇರೆ ದಾರಿ ಹಿಡಿದಿದ್ದ.!
ಸುಶಾನ್ ರೈ ಅವರನ್ನು ಬೆಳಗ್ಗೆ ಅವರ ತಂದೆ ಮನೋಹರ್ ರೈ ಅವರು ಶಾಲೆಗೆ ಬಿಟ್ಟು ಬರುತ್ತಿದ್ದು, ಸಂಜೆ ಆತ ರಿಕ್ಷಾದಲ್ಲಿ ಬೊಳುವಾರಿಗೆ ಬಂದು ಅಲ್ಲಿಂದ ಹರಿಪ್ರಸಾದ್ ಹೊಟೇಲ್ ಪಕ್ಕದ ದಾರಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ. ಆ. 5ರಂದು ಎಂದಿನಂತೆ ಸಂಜೆ ಆಟೋ ರಿಕ್ಷಾದಲ್ಲಿ ಬಂದ ಸುಶಾನ್ ರೈ, ಬೊಳುವಾರಿನಲ್ಲಿ ಇಳಿದು ಬಳಿಕ ನಿತ್ಯ ಹೋಗುವ ರಸ್ತೆಯನ್ನು ಬದಲಾಯಿಸಿ ಬೊಳುವಾರು ವಸತಿ ಸಮುಚ್ಚಯದ ಬಳಿಯ ರಸ್ತೆಯಿಂದ ಮನೆ ಕಡೆಗೆ ಹೊರಟ್ಟಿದ್ದರು. ಆದರೆ ಮನೆ ಕಡೆ ಹೋಗದೆ ವಸತಿ ಸಮುಚ್ಚಯಕ್ಕೆ ಹೋಗಿದ್ದಾರೆ.. ಕೆಲವೇ ಕ್ಷಣದಲ್ಲಿ ಅವರು ಮಹಡಿಯಿಂದ ಬಿದ್ದ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.














