ಓವರ್ಟೇಕ್ ಮಾಡುವ ವೇಳೆ ಬೈಕ್ ಸ್ಕಿಡ್ : ಕಾರಿನಡಿಗೆ ಬಿದ್ದು ಬೈಕ್ ಸವಾರ ಮೃತ್ಯು –ಕಹಳೆ ನ್ಯೂಸ್

ಮಂಗಳೂರು: ಓವರ್ಟೇಕ್ ಮಾಡುವ ವೇಳೆ ಬೈಕ್ ಸ್ಕಿಡ್ ಆಗಿ ಸವಾರ ಕಾರಿನಡಿಗೆ ಬಿದ್ದು ಮೃತಪಟ್ಟ ಘಟನೆ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುಪುರ ಕೈಕಂಬದ ಸಮೀಪ ನಡೆದಿದೆ.
ಮೂಲತಃ ನಗರದ ಮುಲ್ಕಿಯ ಕೆರೆಕಾಡು ನಿವಾಸಿ, ಸದ್ಯ ಮೂಡುಬಿದಿರೆಯಲ್ಲಿ ವಾಸವಾಗಿರುವ ಪ್ರವೀಣ್(36) ಮೃತಪಟ್ಟ ಯುವಕ.
ಮೂಡುಬಿದಿರೆಯಿಂದ ಕೈಕಂಬಕ್ಕೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಪ್ರವೀಣ್ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತದರೂ ಅಷ್ಟರಲ್ಲಾಗಲೇ ಅವರು ಅಸುನೀಗಿದ್ದರು. ಸ್ಥಳಕ್ಕೆ ಬಜ್ಪೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾರೆ ಕೆಲಸ ಮಾಡುತ್ತಿದ್ದ ಪ್ರವೀಣ್ ಪ್ರತಿಭಾನ್ವಿತ ಕಲಾವಿದರೂ ಹೌದು. ನವರಾತ್ರಿ, ಇನ್ನಿತರ ಕಾರ್ಯಕ್ರಮಗಳಲ್ಲಿ ಮೂಡುಬಿದಿರೆಯ ಕೀಲುಕುದುರೆ ತಂಡದಲ್ಲಿ ವೇಷ, ಹುಲಿವೇಷಗಳನ್ನು ಹಾಕುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.














