
ಬೆಳ್ತಂಗಡಿ: ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಹಬ್ಬದ ಕ್ರೀಡಾ ಕೂಟದ ಉದ್ಘಾಟನೆಯನ್ನು ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಮಕ್ಕಳು ಪ್ರತಿಭೆಗಳ ಆಗರ, ಆ ಪ್ರತಿಭೆಗಳನ್ನು ಎಳೆಯ ವಯಸ್ಸಿನಲ್ಲಿಯೇ ಗುರುತಿಸಿ ಸೂಕ್ತ ವೇದಿಕೆ ಒದಗಿಸಿದಾಗ ಬೆಳೆಯಲು ಸಾಧ್ಯವಾಗುತ್ತದೆ. ಪೋಷಕರು ಶಿಕ್ಷಕರ ಮಾರ್ಗದರ್ಶನದಲ್ಲಿ ತಮ್ಮ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿದಾಗ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ನುಡಿದರು.

ಶಾಲಾ ನಾಯಕಿ ಕುಮಾರಿ ಸಪ್ತಮಿ ಮತ್ತು ನೆತ್ತರ ಅಂಗನವಾಡಿ ಕೇಂದ್ರದ ನಾಯಕ ಮಾಸ್ಟರ್ ಅಧ್ವಿತ್ ಇವರ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರುಕ್ಮಿಣಿ ನೆತ್ತರ, ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಗಣೇಶ್, ಹಿರಿಯರಾದ ರಾಧಾಕೃಷ್ಣ ಶೆಟ್ಟಿ ನೆತ್ತರ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉಮನಾಥ ಪೂಜಾರಿ, ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ಇದರ ಅಧ್ಯಕ್ಷರಾದ ಚಂದ್ರ ಪೂಜಾರಿ,ಶಾಲಾ ಮುಖ್ಯೋಪಾಧ್ಯಾಯರಾದ ಸೀತಾರಾಮ್ ಬೆಳಾಲು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗೀತಲತಾ, ನೆತ್ತರ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಹರೀಶ್, ಶಾಲಾ ಸಹಶಿಕ್ಷಕಿ ಶ್ರೀಮತಿ ರೂಪಾ ರುಫೀನಾ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಗೌರವ ಶಿಕ್ಷಕಿ ಕುಮಾರಿ ಚಿರಂಜಿನಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಉಪನಾಯಕ ವರ್ಷಿತ್ ಸ್ವಾಗತಿಸಿ, ಕುಮಾರಿ ಸಾತ್ವಿ ಧನ್ಯವಾದವಿತ್ತರು.

ತದನಂತರ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಪುಟಾಣಿಗಳಿಗೆ ವಿವಿಧ ಆಟೋಟಗಳನ್ನು ಮಾಡಿ ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಮಕ್ಕಳ ಹಬ್ಬದ ಸಂಭ್ರಮವು ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಮುಕ್ತಾಯ ಗೊಂಡಿತು.














