
ಉಡುಪಿ : ಮಹಾಮಳೆಯ ಸಂದರ್ಭದಲ್ಲಿ ಕಾಣೆಯಾಗಿದ್ದ ವ್ಯಕ್ತಿಯೋರ್ವರ ಅಸ್ತಿ ಪಂಜರವು ಹೊಳೆಯ ಸಮೀಪ ಪತ್ತೆಯಾದ ಘಟನೆ ಕಾಪುವಿನಲ್ಲಿ ನಡೆದಿದೆ.
ಮೃತರನ್ನು 72 ವರ್ಷದ ಶ್ರೀನಿವಾಸ ನಾಯ್ಕ ಎಂದು ಗುರುತಿಸಲಾಗಿದೆ. ಇವರು 2020 ರ ಜು. 03ರಂದು ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಸಮೀಪದಲ್ಲಿರುವ ಹೊಳೆಯ ಸೇತುವೆ ಬದಿಯಲ್ಲಿ ಕಾಣೆಯಾಗಿದ್ದವರು ಈವರೆಗೆ ಪತ್ತೆಯಾಗಿಲ್ಲ. ಆದರೆ ನಿನ್ನೆ ಬೆಳಿಗ್ಗೆ ಶ್ರೀನಿವಾಸ ಅವರ ಪತ್ನಿ ರತ್ನ ಎಂಬವರಿಗೆ ಸ್ಥಳೀಯರೊಬ್ಬರು ಕರೆಮಾಡಿ ಮಣಿಪುರದ ಮೂಡು ಕಲ್ಮಂಜೆ ಹೊಳೆಯ ಬದಿಯಲ್ಲಿ ಅಡ್ಡ ಬಿದ್ದ ಮರದ ಸಮೀಪ ಮನುಷ್ಯನ ಮೂಳೆ ಪತ್ತೆಯಾಗಿರುವುದಾಗಿ ಹೇಳಿದ್ದಾರೆ. ಅದರಂತೆ ರತ್ನರವರು, ಸ್ಥಳಕ್ಕೆ ಬಂದು ನೋಡಿದಾಗ ಅಸ್ಥಿ ಪಂಜರದ ಬಳಿಯಿದ್ದ ಅಂಗಿ, ಬಿಳಿ ಬಣ್ಣದ ಲುಂಗಿ ಹಾಗೂ ಉಡಿದಾರವನ್ನು ಗಮನಿಸಿ, ಅದು ಶ್ರೀನಿವಾಸ ಅವರು ಕಾಣೆಯಾಗುವ ವೇಳೆ ಧರಿಸಿದ್ದ ಅಂಗಿ ಎಂದು ಗುರುತಿಸಿದ್ದಾರೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














