
ಪುತ್ತೂರು : ತರಕಾರಿ ಕೃಷಿಯ ಭೀಷ್ಮ ಎಂದೇ ಪ್ರಸಿದ್ದರಾದ ಬನ್ನೂರು ಗ್ರಾಮದ ಕೃಷಿಕ ಧರ್ಣಪ್ಪ ಗೌಡ ಕುಂಟ್ಯಾನರವರು ಚಾರ್ವಾಕ ಗ್ರಾಮದ ಕುಂಟ್ಯಾನ ಫಾರ್ಮ್ನಲ್ಲಿ ಮೃತಪಟ್ಟಿದ್ದಾರೆ.
ಕಳೆದ 50 ವರ್ಷಗಳಿಂದ ತರಕಾರಿ ಕೃಷಿಯಲ್ಲಿ ಪರಿಣಿತರಾಗಿದ್ದ ಧರ್ಣಪ್ಪ ಗೌಡರು ಚಾರ್ವಾಕ, ಸಂಪ್ಯ, ಮಾಡಾವುಗಳಲ್ಲಿ ಜಾಗವನ್ನು ಖರೀದಿಸಿ ತನ್ನ ಕೃಷಿ ಕ್ಷೇತ್ರದ ಸಾಧನೆಯನ್ನು ವಿಸ್ತರಿಸಿದ್ದರು. ಕೃಷಿ ಕ್ಷೇತ್ರದ ಮಹಾನ್ ಸಾಧಕರಾಗಿದ್ದ ಧರ್ಣಪ್ಪ ಗೌಡರನ್ನು ಹಲವಾರು ಪ್ರಶಸ್ತಿಗಳು ಹರಸಿ ಬಂದಿತ್ತು. ಇವರ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿ ಗೌರವಿಸಿದೆ. ಹಣ್ಣಡಿಕೆ ವ್ಯಾಪಾರದಿಂದ ಕೃಷಿ ಜೀವನವನ್ನ ಆರಂಭಿಸಿದ ಇವರು ಮೊದಮೊದಲು ಅಡಿಕೆಯನ್ನು ತಲೆಹೊರೆಯಲ್ಲಿ ಹೊತ್ತು ವ್ಯಾಪಾರ ಮಾಡುತ್ತಿದ್ದರು. ಬಳಿಕ ಎತ್ತಿನಗಾಡಿಯೊಂದನ್ನು ಖರೀದಿಸಿ ಗೇರುಕಟ್ಟೆಯ ತನಕ ಸಂಚರಿಸಿ ವ್ಯಾಪಾರವನ್ನು ವೃದ್ಧಿಸಿಕೊಂಡರು. ನಂತರ ರಿಕ್ಷಾ ಟೆಂಪೋವನ್ನು ಖರೀದಿಸಿ ಅದರಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸಿಕೊಂಡರು. ಧರ್ಣಪ್ಪ ಗೌಡರೊಬ್ಬ ಸೂಕ್ಷ್ಮ ಸಂವೇದನೆಯ ಆರ್ಥಿಕ ತಜ್ಞ. ತನ್ನ ತರಕಾರಿ ವ್ಯಾಪಾರದಲ್ಲಿ ಉಳಿಕೆಯಾದ ಹಣವನ್ನು ಡಬ್ಬಿಯಲ್ಲಿ ಸಂಗ್ರಹಿಸಿಡುತ್ತಿದ್ದರು. ಉತ್ತಮ ಮೊತ್ತವೊಂದು ಸಂಗ್ರಹವಾದಾಗ ಅದನ್ನು ವಿನಿಯೋಗಿಸಿ ಭೂಮಿ ಇಲ್ಲವೆ ವಾಹನಕೊಳ್ಳುವಂತಹ ಬೃಹತ್ ಹೂಡಿಕೆ ಮಾಡುತ್ತಿದ್ದರು. ಕೃಷಿಭೂಮಿಯಲ್ಲಿ ಸುರಿದ ಬೆವರು ಆಸ್ತಿಯಾಗಿ ಪರಿವರ್ತನೆಯಾಗುತ್ತಿತ್ತು. ಆದ್ರೆ ಅಂತಹ ಕೃಷಿಕ ಇದೀಗ ಇಹಲೋಕ ತ್ಯಜಿಸಿ ತಮ್ಮ ಪತ್ನಿ ಚೆನ್ನಮ್ಮ, ಪುತ್ರ ಪ್ರವೀಣ್ ಕುಂಟ್ಯಾನ, ಪುತ್ರಿ ಸುಚಿತ್ರಾ, ಸುಮಿತ್ರಾ ಅಳಿಯಂದಿರಾದ ರಾಧಾಕೃಷ್ಣ, ರವಿ, ಪುತ್ರಿ ಸುನೀತಾ, ಸೊಸೆ ಸವಿತಾ ಪ್ರವೀಣ್ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.














