
ಪುತ್ತೂರು : ಭಾರತೀಯ ಸೇನೆಯಲ್ಲಿ ಸಾಕಷ್ಟು ಅವಕಾಶಗಳಿರುತ್ತವೆ. ಸೇನೆಗೆ ಸೇರ ಬಯಸುವವರು ತನ್ನ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಯೋಚಿಸದೆ ದೇಶದ ಬಗ್ಗೆ ಯೋಚಿಸಬೇಕಾಗುತ್ತದೆ. ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ಸಾಧಿಸಲು ಸೇನೆ ಸಹಾಯಕವಾಗುತ್ತದೆ.
ಸೈನಿಕ ಎನ್ನುವುದು ಉದ್ಯೋಗ ಎಂಬುದಕ್ಕಿಂತ ಸೇವೆ ಎಂದೇ ಪರಿಗಣಿತವಾಗಿದೆ. ಸೇನೆಗೆ ಸೇರಲು ಅಂಕಗಳು ಮುಖ್ಯವಲ್ಲ, ಮನೋಸ್ಥೈರ್ಯ ಪ್ರಮುಖವಾಗುತ್ತದೆ ಎಂದು ಭಾರತೀಯ ಸೇನೆಯ ಕ್ಯಾ. ರಜನೀಶ್ ಲೈಂಕಜೆ ಅವರು ಹೇಳಿದರು. ವಿವೇಕಾನಂದ ಪದವಿ ಕಾಲೇಜಿನ ಐ.ಕ್ಯೂ.ಎ.ಸಿ. ಘಟಕ, ಪ್ಲೇಸ್ಮೆಂಟ್ ಸೆಲ್ ಹಾಗೂ ಯೂತ್ ಫೋರಮ್ನ ಸಂಯುಕ್ತಾಶ್ರಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಶುಕ್ರವಾರ ಅವರು ಮಾತನಾಡಿದರು. ಜೀವನದಲ್ಲಿ ಯಾವುದೇ ಮಿತಿಯನ್ನು ಹಾಕಿಕೊಳ್ಳಬಾರದು. ಎಲ್ಲಾ ಚಟುವಟಿಕೆಗಳಲ್ಲೂ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಮ್ಮೊಳಗಿರುವ ಸಾಮಥ್ರ್ಯವನ್ನು ಮೊದಲು ನಾವೇ ಅರಿತುಕೊಳ್ಳಬೇಕು. ಉತ್ತಮ ವಿಚಾರಗಳಿಂದ ಪ್ರೇರಣೆಗೊಳ್ಳುತ್ತಿರಬೇಕು. ಸೈನ್ಯಕ್ಕೆ ಸೇರುವುದರಿಂದ ಭಾರತದ ಭೌಗೋಳಿಕ ಚೆಲುವನ್ನು, ಸಂಸ್ಕøತಿ ಹಾಗೂ ಭಾಷೆಯನ್ನು ಅರಿತುಕೊಳ್ಳಬಹುದು. ಜೊತೆಗೆ ಸೇನೆಯಲ್ಲಿ ಸೇವೆ ಸಲ್ಲಿಸುವುದು ಹೆಚ್ಚಿನ ಆತ್ಮತೃಪ್ತಿಯನ್ನು ನೀಡುತ್ತದೆ. ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಲ್ಲೂ ಎನ್.ಸಿ.ಸಿ ಕಡ್ಡಾಯವಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಭಕ್ತರಾಗಿರುವುದು ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಘಟಕದ ಸಂಯೋಜಕಿ ರೇಖಾಪಿ., ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಭಟ್ ಹಾಗೂ ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ಅಂಬಿಕಾ ಉಪಸ್ಥಿತರಿದ್ದರು. ತೃತೀಯ ಬಿ.ಎಸ್ಸಿ ವಿದ್ಯಾರ್ಥಿ ಅಖಿಲ್ ಸ್ವಾಗತಿಸಿ, ವಿಷ್ಣು ಎಂ.ಎಸ್. ವಂದಿಸಿದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಹೃತಿಕಾ ಕಾರ್ಯಕ್ರಮ ನಿರೂಪಿಸಿದರು.














