ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕರುಣಾಕರ ಸುವರ್ಣ ಆಯ್ಕೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ದ.ಕ ಜಿಲ್ಲೆಯ ಎ’ ಶ್ರೇಣಿಯ ದೇವಾಲಯಗಳಲ್ಲಿ ಒಂದಾಗಿರುವ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಕರುಣಾಕರ ಸುವರ್ಣ ಆಯ್ಕೆಯಾಗಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಟಂದೂರು., ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ತಾಪಂ ಸದಸ್ಯ ಮುಕುಂದ ಗೌಡ ರವರ ಉಪಸ್ಥಿತಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕರುಣಾಕರ ಸುವರ್ಣರವರ ಹೆಸರನ್ನು ಸದಸ್ಯರಾದ ಜಯಂತ ಪೊರೋಳಿ ಸೂಚಿಸಿ, ಹರಿರಾಮಚಂದ್ರ ಅನುಮೋದಿಸುವ ಮೂಲಕ ಸರ್ವಾನುಮತದಿಂದ ಆಯ್ಕೆ ನಡೆಸಲಾಯಿತು.
ಶಾಸಕ ಸಂಜೀವ ಮಟಂದೂರು ಮಾತನಾಡಿ ದೇವಾಲಯಗಳು ಹಿಂದೂ ಸಮಾಜದ ಶಕ್ತಿ ಕೇಂದ್ರಗಳಾಗಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವಂತಹ ಕಾರ್ಯಕ್ರಮಗಳಿಂದ ದೇವಳದ ಅಭಿವೃದ್ಧಿಯತ್ತ ತ್ರಿಕರಣಪೂರ್ವಕವಾಗಿ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಆಯ್ಕೆಗೊಂಡ ಸದಸ್ಯರುಗಳಾದ ದೇವಳದ ಮೇಲುಶಾಂತಿ ಅರ್ಚಕ ಹರೀಶ್ ಉಪಾಧ್ಯಾಯ, ಹರಿಣಿ ಕೆ.ವಿ, ಪ್ರೇಮಲತಾ ಕೆ, ರಾಮ ನಾಯ್ಕ್, ಹರಿರಾಮಚಂದ್ರ, ಸುನಿಲ್ ಎ, ಮಹೇಶ್ ಜಿ, ಜಯಂತ ಪೋರೋಳಿರವರುಗಳಿಗೆ ಹೂವು ನೀಡಿ ಶಾಸಕರು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಅನುಪಸ್ಥಿತಿಯಲ್ಲಿ ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಕಚೇರಿ ಸಿಬ್ಬಂದಿಗಳಾದ ಪದ್ಮನಾಭ ಕುಲಾಲ್ ಹಾಗೂ ದಿವಾಕರ ಗೌಡ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಸಭೆಯಲ್ಲಿ ಸುಂದರ ಗೌಡ, ಉಮೇಶ್ ಶೆಣೈ, ರವೀಂದ್ರ ಆಚಾರ್ಯ ಇಳಂತಿಲ, ಜಗದೀಶ್ ಶೆಟ್ಟಿ, ಯು.ಜಿ ರಾಧಾ, ಕಿಶೋರ್ ಕುಮಾರ್ ಜೋಗಿ, ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಕರುಣಾಕರ ಸುವರ್ಣ ಯಾರು.!? :
ಎಸ್, ಹೌದು ಈ ಹಿಂದೆಯೂ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಕರುಣಾಕರ ಸುವರ್ಣ ರವರು ತನ್ನ ಆಡಳಿತಾವಧಿಯಲ್ಲಿ ಭಕ್ತ ಸಮೂಹವನ್ನು ದೇವಳದತ್ತ ಸೆಳೆಯುವಂತೆ ಮಾಡಿ, ದೇವಳದ ಬಹುಕಾಲದ ಕನಸಾಗಿದ್ದ ಬ್ರಹ್ಮರಥವನ್ನು ಭಕ್ತಾದಿಗಳ ಸಹಕಾರದಿಂದ ಸಮರ್ಪಿಸಿದ್ದಲ್ಲದೆ, ಶ್ರೀಮಹಾಕಾಳಿಗೆ ಚಿನ್ನದ ಮಾಂಗಲ್ಯ ಸರವನ್ನು ಸಮರ್ಪಿಸಿ ಬ್ರಹ್ಮಕಲಶೋತ್ಸವವನ್ನೂ ಸ್ಮರಣೀಯವಾಗಿ ನಡೆಸಿಕೊಟ್ಟಿದ್ದರು. ಹಾಗೂ ಹಲವಾರು ಅಭಿವೃದ್ಧಿ ಕಾರ್ಯಗಳ ಜೊತೆಗೆ ದೇವಾಲಯದಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಗಮನ ಸೆಳೆದಿದ್ದರು. ಉದ್ಯಮಿಯೂ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದ ಮುಂದಾಳುವೂ ಆಗಿರುವ ಇವರು ಉಪ್ಪಿನಂಗಡಿಯ ಶ್ರೀ ರಾಮ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಮರ್ಪಣಾ ಮನೋಭಾವದಿಂದ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.














