ಎಡನೀರು ಮಠದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಲಿರುವ ಪುತ್ತೂರು ವಿವೇಕಾನಂದ ಕಾಲೇಜ್ನ ಹಳೆ ವಿದ್ಯಾರ್ಥಿ-ಕಹಳೆ ನ್ಯೂಸ್

ಪುತ್ತೂರು: ಶಿಸ್ತು, ಸಜ್ಜನಿಕೆ ಮತ್ತು ನಯ ವಿನಯಗಳ ವ್ಯಕ್ತಿತ್ವವನ್ನು ವಿದ್ಯಾರ್ಥಿ ಜೀವನದಲ್ಲಿಯೇ ರೂಢಿಸಿಕೊಂಡಿದ್ದ ಪುತ್ತೂರು ವಿವೇಕಾನಂದ ಕಾಲೇಜ್ನ ಹಳೆ ವಿದ್ಯಾರ್ಥಿ ಜಯರಾಮ ಮಂಜತ್ತಾಯ ಸೆ. 28ರಂದು ಕಾಸರಗೋಡಿನ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಎಂಬ ಮರುನಾಮಕರಣದ ಮೂಲಕ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.
ಈಗಾಗಲೆ ವಿವೇಕಾನಂದ ಕಾಲೇಜ್ನಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳಲ್ಲಿ ಮೂವರು ಸನ್ಯಾಸ ದೀಕ್ಷೆ ಪಡೆದು ಮಠಾಧೀಶರಾಗಿದ್ದಾರೆ. ಸುಬ್ರಹ್ಮಣ್ಯ ಮಠಾಧೀಶರಾಗಿದ್ದ ಶ್ರೀ ವಿದ್ಯಾಭೂಷಣ ತೀರ್ಥಸ್ವಾಮೀಜಿಯವರು ಪುತ್ತೂರು ವಿವೇಕಾನಂದ ಕಾಲೇಜ್ನ ಹಳೆ ವಿದ್ಯಾರ್ಥಿಯಾಗಿದ್ದು, ಕೋಲ್ಯ ಮಠಾಧೀಶರಾಗಿದ್ದ ಶ್ರೀ ರಮಾನಂದ ಸ್ವಾಮೀಜಿಯವರು ವಿವೇಕಾನಂದ ಕಾಲೇಜ್ನಲ್ಲಿ ಶಿಕ್ಷಣವನ್ನು ಪಡೆದಿದ್ದರು. ಇದೀಗ ವಿವೇಕಾನಂದ ಕಾಲೇಜ್ನಲ್ಲಿ ಪದವಿ ಶಿಕ್ಷಣ ಪಡೆದ ಜಯರಾಮ ಮಂಜತ್ತಾಯ ಎಡನೀರು ಮಠದ ಉತ್ತರಾಧಿಕಾರಿಯಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯಾಗಿ ಸನ್ಯಾಸತ್ವ ಸ್ವೀಕರಿಸಲಿದ್ದಾರೆ.














