ದೆಹಲಿಯ ತಬ್ಲೀಫೀ ಎ ಜಮಾಅತ್ ಸಭೆಯಲ್ಲಿ ಉಪ್ಪಿನಂಗಡಿ ನಿವಾಸಿ ಭಾಗಿ ; ಪೊಲೀಸರಿಂದ ವಿಚಾರಣೆ – ವೆನ್ಲಾಕ್ ಗೆ ಸ್ಥಳಾಂತರ – ಕಹಳೆ ನ್ಯೂಸ್

ಉಪ್ಪಿನಂಗಡಿ: ತಬ್ಲೀಫೀ ಎ ಜಮಾಅತ್ ವತಿಯಿಂದ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಉಪ್ಪಿನಂಗಡಿ ನಿವಾಸಿಯೋರ್ವರು ಭಾಗವಹಿಸಿದ್ದಾರೆ ಎಂಬ ಶಂಕೆಯ ಹಿನ್ನಲೆಯಲ್ಲಿ ಉಪ್ಪಿನಂಗಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೀಗ ಈ ವ್ಯಕ್ತಿಯನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ರಾಮನಗರ ಬಳಿಯ ನಿವಾಸಿಯಾಗಿರುವ ಈತ ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಬಂದಿದ್ದರಿಂದ ಪೊಲೀಸರು ಬೆಳಗ್ಗೆಯೇ ಅವರ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ಇವರು ಸಂಘಟನೆಯೊಂದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ದೆಹಲಿಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹಲವರು ಈಗಾಗಲೇ ಕೊರೋನಾ ಪೀಡಿತರಾಗಿದ್ದು, ಈ ಪೈಕಿ ಕೆಲವರು ಮೃತಪಟ್ಟಿದ್ದಾರೆ. ಅಲ್ಲದೇ ಸಭೆಯಲ್ಲಿ ಭಾಗಿಯಾಗಿದ್ದವರಲ್ಲಿ ಹಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಈ ಮಧ್ಯೆ ಈ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿಯ ವ್ಯಕ್ತಿಯೂ ಭಾಗಿಯಾಗಿದ್ದರು ಎಂಬ ಸುದ್ದಿ ಹರಡಿರುವುದರಿಂದ ಆತಂಕ ಸೃಷ್ಠಿಯಾಗಿದೆ.














