ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಬಂಟ್ವಾಳನಲ್ಲಿ ಬೆಳಕಿಗೆ ಬಂದಿದೆ- ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳದ ಕ್ಯಾಬ್ ಚಾಲಕನಾಗಿದ್ದ ಸಂತೋಷ್(34) 2014ರಲ್ಲಿ 14 ವರ್ಷ ಪ್ರಾಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಹಿನ್ನೆಲೆಯಲ್ಲಿ ವಾದ ವಿವಾದಗಳನ್ನು ಆಲಿಸಿದ ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ 10 ವರ್ಷಗಳ ಕಠಿಣ ಸಜೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದ್ದರು ಆದರೆ ಸಂತೋಷ್ ವಿವಾಹಿತನಾಗಿದ್ದು, 2014ರ ಜುಲೈನಲ್ಲಿ ಹತ್ತಿರದ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಎಂಬುದಾಗಿ ವಿಶೇಷ ಸರಕಾರಿ ಅಭಿಯೋಜ ಸಿ ವೆಂಕಟರಮಣ ಸ್ವಾಮಿ ವಿವರ ನೀಡಿದ್ದಾರೆ.
ಆತ ಬಾಲಕಿಯನ್ನು ಹೆದರಿಸಿ ಅದೇ ಸ್ಥಳಕ್ಕೆ ಪ್ರತೀ ವಾರ ಕರೆಸಿಕೊಂಡು ದೌರ್ಜನ್ಯ ಮುಂದುವರಿಸಿದ್ದ. ಇದರಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದಲ್ಲದೆ 2015ರ ಜುಲೈ 28ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.ಈ ಘಟನೆ ನಂತರ ಸಂತ್ರಸ್ತ ಬಾಲಕಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ದೂರಿನ ಮೇರೆ ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ನಂತರ ನ್ಯಾಯಾಲಯ ಸಂತ್ರಸ್ತೆ, ಮಗು ಮತ್ತು ಆರೋಪಿಯ ಡಿಎನ್ಎ ಪರೀಕ್ಷೆಗೆ ಆದೇಶ ನೀಡಿತ್ತು. ಡಿಎನ್ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಸಂತೋಷ್ ಎಂಬುದು ಖಚಿತಪಟ್ಟಿತ್ತು.
ವಿಚಾರಣೆ ವೇಳೆ 13 ಜನರ ಸಾಕ್ಷ್ಯಗಳನ್ನು ಮತ್ತು 19 ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ನಂತರ ಆರೋಪಿಯು ಅಪರಾಧಿ ಎಂಬುದು ದೃಢ ಪಟ್ಟ ನಂತರ ಈ ಶಿಕ್ಷೆ ನೀಡಲಾಗಿದೆ. ದಂಡದಲ್ಲಿ 7,500 ರೂಪಾಯಿಗಳನ್ನು ಬಾಲಕಿಗೆ ನೀಡಬೇಕು ಎಂಬುದಾಗಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಸಂತ್ರಸ್ತೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರವನ್ನು ಪಡೆದುಕೊಳ್ಳಲು ಅರ್ಹಳಿದ್ದಾಳೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.














