
ಬೆಳ್ತಂಗಡಿ: ವಿದ್ಯುತ್ ಅಪಘಾತಗೊಳಗಾಗಿ ಮಹಿಳೆಯೊಬ್ಬರು ಮೃತರಾದ ಘಟನೆ ಬೆಳ್ತಂಗಡಿ ನಗರದ ರೆಂಕೆದ ಗುತ್ತು ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿ ದಿ.ಸಂಜೀವ ಅವರ ಪತ್ನಿ ಸುಂದರಿ (55) ಮೃತರಾದವರು. ಮಧ್ಯರಾತ್ರಿ 12.30ರ ಸುಮಾರಿಗೆ ಹಟ್ಟಿಯಲ್ಲಿ ದನ, ಕರುಗಳ ಕೂಗು ಕೇಳಿ ಹಟ್ಟಿಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಹಟ್ಟಿಗೆ ಅಳವಡಿಸಿದ ವಯರ್ ನಿಂದ ವಿದ್ಯುತ್, ಕಬ್ಬಿಣದ ಕಂಬದ ಮೂಲಕ ಸ್ರವಿಸಿ ಈ ಘಟನೆ ಸಂಭವಿಸಿದೆ. ಕಬ್ಬಿಣದ ಕಂಬವನ್ನು ಹಿಡಿದುಕೊಂಡ ಮಹಿಳೆಯ ಬೊಬ್ಬೆ ಕೇಳಿ ಮನೆಯವರು ಓಡಿ ಬಂದಾಗ ನೆಲದ ಮೇಲೆ ಬಿದ್ದಿದ್ದ ಅವರನ್ನು ತಕ್ಷಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾದರೂ ಆಗಲೇ ಅವರು ದಾರಿ ಮಧ್ಯೆ ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದರು.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್ಐ ಕಲೈಮಾರ್ , ಮೆಸ್ಕಾಂ ಎಇಇ ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದರು. ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತರಿಗೆ ದ.ಸಂ.ಸ ಮುಖಂಡ, ಬಿಎಸ್ಪಿ ನಾಯಕ ರಮೇಶ್ ಆರ್ ಸೇರಿದಂತೆ ಮೂರು ಜನ ಹೆಣ್ಣು ಮಕ್ಕಳಿದ್ದಾರೆ.














