ಯಾರಿಗೆ ಹೇಳಿ ಮುಂಬೈಗೆ ಹೋದರು? ಇದೇನು ಒನ್ಮ್ಯಾನ್ ಶೋನಾ; ಡಿಕೆಶಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ರಾಜಕೀಯದ ಹೈಡ್ರಾಮ ಈಗ ರಾಜ್ಯದಿಂದ ಹೊರ ರಾಜ್ಯಕ್ಕೆ ಸ್ಥಳಾಂತರಗೊಂಡಿದೆ. ಮುಂಬೈಗೆ ತೆರಳಿರುವ ಅತೃಪ್ತ ಶಾಸಕರನ್ನು ಮರಳಿ ಕರೆತರಲು ಡಿಕೆಶಿ ಪಟ್ಟು ಹಿಡಿದಿದ್ದು ವಿಫಲರಾಗಿದ್ದಾರೆ, ಇದಕ್ಕೆ ಕುರಿತಂತೆ ಸಿದ್ದರಾಮಯ್ಯ ಅಸಮಾಧಾನವನ್ನು ಹೊರಹಾಕಿದ್ದಾರೆ.
ಅತೃಪ್ತರ ಮನವೊಲಿಕೆಗೆ ಮುಂಬೈಗೆ ತೆರಳಿರುವ ಡಿಕೆಶಿ ವಿರುದ್ಧ ಮಹಾರಾಷ್ಟ್ರ ಸರ್ಕಾರ ನಡೆದುಕೊಂಡ ರೀತಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟು ಮಾಡಿದೆ. ಡಿಕೆ ಶಿವಕುಮಾರ್ ಯಾರನ್ನು ಕೇಳಿ ಮುಂಬೈಗೆ ಹೋದರು ಎಂದು ಆಪ್ತರ ಎದುರು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಇಂದು ತಮ್ಮ ಆಪ್ತರೊಡನೆ ಮಾತನಾಡಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮುಂಬೈಗೆ ಹೋಗುವ ಮೂಲಕ ಪಕ್ಷದ ಮರ್ಯಾದೆ ಕಳೆದಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರಂತೆ.
ಮುಂಬೈನಲ್ಲಿ ಡಿಕೆ ಶಿವಕುಮಾರ್ ಅವರನ್ನು ಹೋಟೆಲ್ ಒಳಗೂ ಸೇರಿಸಿಲ್ಲ, ಜತೆಗೆ ಅತೃಪ್ತ ಶಾಸಕರು ಮುಂಬೈ ಪೊಲೀಸ್ ಆಯುಕ್ತರಿಗೆ ಭದ್ರತೆ ನೀಡಿ ಎಂದು ಮನವಿ ಮಾಡಿದ್ದಾರೆ.
ಇದೆಲ್ಲದರಿಂದ ಪಕ್ಷದ ವರ್ಚಸ್ಸಿಗೆ ತೊಂದರೆಯಾಗುತ್ತದೆ. ಹೀಗಿರುವಾಗ ಕೇವಲ ಮುಖ್ಯಮಂತ್ರಿಯ ಗಮನಕ್ಕೆ ತಂದು ಪಕ್ಷದ ನಾಯಕರಿಗೂ ಹೇಳದೇ ಹೋಗಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಭಿನ್ನಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.














