
ಕನ್ನಡದ ಸೂಪರ್ ಹಿಟ್ ಸಿನಿಮಾ ‘ಮಫ್ತಿ’ ಈಗ ತಮಿಳಿನಲ್ಲಿ ರಿಮೇಕ್ ಆಗುತ್ತಿದೆ. ಈ ಚಿತ್ರದ ಪೂಜಾ ಕಾರ್ಯಕ್ರಮ ಇತ್ತೀಚಿಗಷ್ಟೆ ನೆರವೇರಿದೆ. ‘ಮಫ್ತಿ’ ಚಿತ್ರದ ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಈ ಪಾತ್ರವನ್ನು ತಮಿಳಿನಲ್ಲಿ ಯಾರು ನಿರ್ವಹಿಸಬಹುದು ಎನ್ನುವ ನಿರೀಕ್ಷೆ ಇತ್ತು. ಅಂದಹಾಗೆ, ಈ ಪಾತ್ರದಲ್ಲಿ ನಟ ಸಿಂಬು ಕಾಣಿಸಿಕೊಳ್ಳುತ್ತಿದ್ದಾರೆ.

ಕಾವೇರಿ ವಿಚಾರದಲ್ಲಿ ಕನ್ನಡಿಗರ ಮನ ಗೆದ್ದ ಈ ನಟ ಈಗ ಈ ಸಿನಿಮಾದ ನಾಯಕನಾಗಿದ್ದಾರೆ. 25 ದಿನಗಳ ಕಾಲ ಕಾಲ್ ಶೀಟ್ ನೀಡಿದ್ದು, ಅದರ ಒಳಗೆ ಸಿನಿಮಾದ ಅವರ ಭಾಗದ ಚಿತ್ರೀಕರಣ ಮುಗಿಯಲಿದೆ. ಶ್ರೀಮುರಳಿ ಪಾತ್ರದಲ್ಲಿ ಗೌತಮ್ ಕಾರ್ತಿಕ್ ನಟಿಸುತ್ತಿದ್ದಾರೆ. ಸಿಂಬು ಗ್ಯಾಂಗ್ ಸ್ಟರ್ ಹಾಗೂ ಗೌತಮ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಬಾಹುಬಲಿ ತಮಿಳು ಚಿತ್ರಕ್ಕೆ ಡೈಲಾಗ್ ಬರೆದಿದ್ದ ಮಾಧವನ್ ಕಾರ್ತಿ ಈ ಸಿನಿಮಾಗೂ ಸಂಭಾಷಣೆ ಬರೆದಿದ್ದಾರೆ. ವಿಶೇಷ ಅಂದರೆ, ಕನ್ನಡದ ನಿರ್ದೇಶಕ ನರ್ತನ್ ಅವರೇ ಅಲ್ಲಿಯೂ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಈ ಸಿನಿಮಾ ಸೂಪರ್ ಹಿಟ್ ಆಗಿದ್ದು, ಈಗ ತಮಿಳಿನಲ್ಲಿ ಸಿನಿಮಾ ಬರುತ್ತಿದೆ. ತಮಿಳಿಗೆ ತಕ್ಕಂತೆ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.















