
ಬೆಂಗಳೂರು : ‘ಮೈತ್ರಿ ಸರ್ಕಾರದ ವಿರುದ್ಧ ನನಗೆ ಅಸಮಾಧಾನ ಎನ್ನುವ ಪ್ರಶ್ನೆಯೇ ಇಲ್ಲ. ಏಕೆಂದರೆ ನನಗೆ ಅಸಮಾಧಾನವೇ ಆಗಿಲ್ಲ’ ಎಂದು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಬಿ.ಸಿ.ಪಾಟೀಲ್ ಅವರು ಬಿಜೆಪಿ ಸೇರಲಿದ್ದಾರೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅವರು ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.ಈ ಕುರಿತು ಮಾತನಾಡಿರುವ ಬಿ.ಸಿ.ಪಾಟೀಲ್, ‘ನನಗೆ ಸಚಿವ ಸ್ಥಾನ ನೀಡದ ಬಗ್ಗೆ ಅಸಮಾಧಾನ ಇದ್ದೇ ಇದೆ. ಜಿಲ್ಲೆಯಲ್ಲಿ ಏಕೈಕ ಶಾಸಕನಾಗಿ ಆಯ್ಕೆಯಾಗಿದ್ದರೂ ಕೂಡ ಸಚಿವ ಸ್ಥಾನ ಕೊಟ್ಟಿಲ್ಲ’ ಎಂದು ಹೇಳಿದರು.
‘ರಮೇಶ್ ಜಾರಕಿಹೊಳಿ ಅವರನ್ನು ನಾನು ಭೇಟಿ ಮಾಡಿಲ್ಲ. ಬಿಜೆಪಿ ಸೇರುವ ಬಗ್ಗೆಯೂ ಚಿಂತನೆ ನಡೆಸಿಲ್ಲ. ನಾನು ಸನ್ಯಾಸಿಯಲ್ಲ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಆಲೋಚನೆ ಮಾಡುತ್ತೇನೆ, ಜನರು ಹೇಳುವುದನ್ನು ಕೇಳುತ್ತೇನೆ’ ಎಂದು ತಿಳಿಸಿದರು.















