
ಹುಬ್ಬಳ್ಳಿ: ಮೇ 23ರ ಬಳಿಕ ಸಮ್ಮಿಶ್ರ ಸರ್ಕಾರದ ಟೈಂ ಬಾಂಬ್ ಸಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವ ಹೇಳಿಕೆ ಹಿಂದೆ ಅವರ ಕುತಂತ್ರವಿದೆ. ಸಮ್ಮಿಶ್ರ ಸರ್ಕಾರಕ್ಕೆ ಅವರು ಟೈಂ ಬಾಂಬ್ ಇಟ್ಟಿದ್ದಾರೆ. ಇದು ಮೇ 23ರ ಬಳಿಕ ಸಿಡಿಯಲಿದೆ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ಅವರೇ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಕಣಕ್ಕಿಳಿಯುವಂತೆ ಮಾಡಿರುವುದು. ಚೆಲುವರಾಯಸ್ವಾಮಿ ಹೇಳಿಕೆ ಕೂಡ ಅವರಿಂದಾಗಿ ಬಂದಿರುವುದು. ಈ ಎರಡು ಪಕ್ಷಗಳ ಒಳಜಗಳ ಹೊರಗೆ ಬರುತ್ತಿದೆ ಎಂದರು.















