
ಮುಂಬಯಿ: ಹಿಂದೂ ಮಹಾಸಾಗರದಲ್ಲಿ ಪ್ರಭುತ್ವ ಸಾಧಿಸಲು ಹೊಂಚು ಹಾಕಿರುವ ಚೀನಾದ ಮೇಲೆ ಕಣ್ಣಿಟ್ಟು, ಭಾರತ ಹಾಗೂ ಫ್ರಾನ್ಸ್ ಶುಕ್ರವಾರ ನೌಕಾ ಕವಾಯತನ್ನು ಆರಂಭಿಸಿದೆ. ಈ ಪ್ರದೇಶದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ನಾವು ಒಟ್ಟಾಗಿ ಶ್ರಮಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ನೌಕಾ ಕವಾಯತು ಮಹತ್ವ ಪಡೆದಿದೆ ಎಂದು ಫ್ರಾನ್ಸ್ ನ ರಿಯರ್ ಅಡ್ಮಿರಲ್ ಒಲಿವಿಯರ್ ಲೆಬಾಸ್ ಹೇಳಿದ್ದಾರೆ.
ಎರಡೂ ದೇಶಗಳ ಒಟ್ಟು 12 ಯುದ್ಧ ವಿಮಾನಗಳು ಮತ್ತು ಸಬ್ಮೆರೀನ್ಗಳು ಗೋವಾ ಕರಾವಳಿಯಿಂದ ಕವಾಯತು ಆರಂಭಿಸಿವೆ. 2001 ರಿಂದಲೂ ಉಭಯ ದೇಶಗಳು ಈ ಕವಾಯತು ನಡೆಸುತ್ತಿವೆ. ಆದರೆ ಈಗ ನಡೆಯುತ್ತಿರುವ ಕವಾಯತು ಹಿಂದಿನ ಎಲ್ಲದಕ್ಕಿಂತಲೂ ದೊಡ್ಡ ಮಟ್ಟದ್ದು ಎಂದೂ ಲೆಬಾಸ್ ನುಡಿದಿದ್ದಾರೆ.














