
ಮಂಡ್ಯ: “2013 ರಲ್ಲಿ ರಮ್ಯಾ ಅವರನ್ನು ಗೆಲ್ಲಿಸಿದ್ದು ಆಗ ನಾಗಮಂಗಲದ ಜೆಡಿಎಸ್ ಶಾಸಕರಾಗಿದ್ದ ಚಲುವರಾಯಸ್ವಾಮಿ” ಎಂಬ ಸ್ಫೋಟಕ ಸುದ್ದಿಯನ್ನು ನಾಗಮಂಗಲದ ಹಾಲಿ ಶಾಸಕ ಸುರೇಶ್ ಗೌಡ ಹೊರಹಾಕಿದ್ದಾರೆ. ಮಂಡ್ಯದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ಚಲುವರಾಯಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸುರೇಶ್ ಗೌಡ ಅವರು, “ಚಲುವರಾಯ ಸ್ವಾಮಿ ಅವರ ಬಗ್ಗೆ ಗೊತ್ತಿಲ್ಲದಿರುವುದು ಏನೂ ಅಲ್ಲ. ಅವರು ಜೆಡಿಎಸ್ನಲ್ಲಿದ್ದಾಗಲೇ ಮಂಡ್ಯದಲ್ಲಿ 2013ರ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಮ್ಯಾ ಅವರ ಪರ ಕೆಲಸ ಮಾಡಿದ್ದರು. ಜೆಡಿಎಸ್ ಅಭ್ಯರ್ಥಿ ಸಿ.ಎಸ್ ಪುಟ್ಟರಾಜು ಅವರು ಆಗ ಅಚ್ಚರಿಯ ಸೋಲು ಕಾಣುವುದಕ್ಕೂ ಅವರೇ ಕಾರಣ” ಎಂದು ಸುರೇಶ್ ಗೌಡ ಹೇಳಿದರು.
“ಆದರೆ 2014ರ ಲೋಕಸಭೆ ಚುನಾವಣೆಯ ಹೊತ್ತಿಗೆ ಚಲುವರಾಯಸ್ವಾಮಿ ಅವರ ಷಡ್ಯಂತ್ರಗಳ ಬಗ್ಗೆ ಅರಿತ ಪುಟ್ಟರಾಜು ಆವರು ಎಚ್ಚರಿಕೆಯ ನಡೆ ಇಟ್ಟು ಗೆಲುವು ಸಾಧಿಸಿದರು. ನಾನು ಆ ಸಂದರ್ಭದಲ್ಲಿ ಕಾಂಗ್ರೆಸ್ ನಲ್ಲಿಯೇ ಇದ್ದುದ್ದರಿಂದ ಆಗ ಜೆಡಿಎಸ್ ನಲ್ಲಿದ್ದ ಯಾರೆಲ್ಲ ರಮ್ಯಾ ಗೆಲುವಿಗಾಗಿ ಶ್ರಮಿಸಿದ್ದರು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತು” ಎಂದು ಸುರೇಶ್ ಗೌಡ ಹೇಳಿದರು.














