
ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಆಶಯದೊಂದಿಗೆ ಆರಂಭಗೊಂಡು ಕುಂಟುತ್ತಾ ಸಾಗಿರುವ ಎತ್ತಿನಹೊಳೆ ಯೋಜನೆಯಲ್ಲಿ ಬರೀ ಅಕ್ರಮಗಳೇ ನಡೆಯುತ್ತಿವೆ. ಪ್ರಾಥಮಿಕ ಹಂತದ ಕಾಮಗಾರಿ ಮುಗಿಯುವ ಮೊದಲೇ ಕೊನೆಯ ಹಂತದ ಪ್ರದೇಶಗಳಲ್ಲಿ ಕಾಲುವೆ ನಿರ್ವಣಕ್ಕಾಗಿ 3 ಸಾವಿರ ಕೋಟಿ ರೂಪಾಯಿಗಳ ಟೆಂಡರ್ ಪ್ರಕ್ರಿಯೆಯನ್ನು ಜಲ ಸಂಪನ್ಮೂಲ ಇಲಾಖೆ ಅಂತಿಮಗೊಳಿಸಿರುವುದು ಅನುಮಾನ ಮೂಡಿಸಿದೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲೇ ಶ್ರೀವಿಶ್ವೇಶ್ವರಯ್ಯ ಜಲ ನಿಗಮ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿದೆ. ಯೋಜನೆ ಅಡಿ 12 ಕಾಲುವೆ ನಿರ್ವಣಕ್ಕೆ ಅನುಭವ ಇಲ್ಲದ ಗುತ್ತಿಗೆದಾರರಿಗೆ ಟೆಂಡರ್ ನೀಡಿರುವ ಅಚ್ಚರಿಯೂ ಅನಾವರಣಗೊಂಡಿದೆ.

ಸಕಲೇಶಪುರದ ಬಳಿ ಹರಿಯುವ ಎತ್ತಿನಹೊಳೆ ಹಾಗೂ ಅದರ ಉಪ ಹೊಳೆಗಳ ನೀರನ್ನು ಪೈಪ್ಲೇನ್ ಮೂಲಕ ಬಯಲು ಸೀಮೆ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರಕ್ಕೆ ನೀರು ಹರಿಸುವ ಯೋಜನೆ ಇದಾಗಿದ್ದರೂ ಮಂಗಳೂರು ನಗರಕ್ಕೇ ನೀರಿಲ್ಲದೆ ಜನರು ಪರದಾಟುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಬೇರೆ ಊರಿಗೆ ಇವರು ಹೇಗೆ ಹಾಗು ಎಲ್ಲಿಂದ ನೀರನ್ನು ಒದಗಿಸುತ್ತಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡದ ಉಳಿವಿಗೇ ಕುತ್ತು ಬರುತ್ತದೆ ಎಂದು ಹೋರಾಟ ಮಾಡಿದ್ದ ರಾಜಕೀಯ ಮುಖಂಡರು ಈಗ ಏನು ಮಾಡುತ್ತಿದ್ದಾರೆ ಎಂಬುದೇ ಜನಸಾಮಾನ್ಯನ ಪ್ರಶ್ನೆಯಾಗಿದೆ.














