
ಖಾಸಗಿ ಬಸ್ ಒಂದರಲ್ಲಿ ಚಲಿಸುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿದ್ದು, ಅಕ್ಕಪಕ್ಕದಲ್ಲಿ ಹೋಗುತ್ತಿದ್ದ ವಾಹನ ಸವಾರರು ಹಾಗೂ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ದೊಡ್ಡ ದುರಂತ ತಪ್ಪಿದೆ.
ಕರ್ನಾಟಕ – ತಮಿಳುನಾಡು ಗಡಿ ಭಾಗದ ಶೂಲಗಿರಿ ಸಮೀಪ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ತಮಿಳುನಾಡಿನ ತಿಪಟ್ಟುಗೆ ತೆರಳುತ್ತಿದ್ದ ಶರ್ಮಾ ಟ್ರಾವೆಲ್ಸ್ ಗೆ ಸೇರಿದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇದನ್ನು ಗಮನಿಸಿದ ಅಕ್ಕಪಕ್ಕದಲ್ಲಿ ಹೋಗುತ್ತಿದ್ದ ವಾಹನ ಸವಾರರು ಜೋರಾಗಿ ಕೂಗಿ ಬಸ್ ಚಾಲಕನನ್ನು ಎಚ್ಚರಿಸಿದ್ದಾರೆ. ಆತ ಸಮಯಪ್ರಜ್ಞೆ ಮೆರೆದು ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಬೆಂಕಿ ಇಡೀ ಬಸ್ ಗೆ ಆವರಿಸಿಕೊಂಡಿದ್ದು, ನೋಡನೋಡುತ್ತಲೇ ಸುಟ್ಟು ಕರಕಲಾಗಿದೆ.














