
“ಪ್ರಧಾನಿ ನರೇಂದ್ರ ಮೊದಿ ಅವರಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ನೀಡಬೇಕು ಎನ್ನುವ ಮೂಲಕ ಮಮತಾ ಬ್ಯಾನರ್ಜಿ ಎಲ್ಲಾ ಗೆರೆಗಳನ್ನೂ ದಾಟಿದ್ದಾರೆ” ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
“ಮಮತಾ ಜೀ, ನೀವು ಇಂದು ಎಲ್ಲಾ ಗೆರೆಗಳನ್ನೂ ದಾಟಿದ್ದೀರಿ. ನೀವು ಒಂದು ರಾಜ್ಯದ ಮುಖ್ಯಮಂತ್ರಿ. ಮತ್ತು ಪ್ರಧಾನಿ ಮೋದಿಜೀ ಅವರು ಒಂದು ದೇಶದ ಪ್ರಧಾನಿ ಎಂಬುದನ್ನು ಮರೆಯದಿರಿ. ನೀವು ನಾಳೆ ಅವರೊಂದಿಗೆ ಮಾತನಾಡಬೇಕಾಗಬಹುದು. ಆದ್ದರಿಂದಲೇ ನಾನು ನಿಮಗೊಂದು ಸಾಲು ನೆನಪಿಸುತ್ತೇನೆ… ನೀವು ವೈರತ್ವ ಸಾಧಿಸಿ, ಆದರೆ ಮುಂದೊಮ್ಮೆ ನಾವು ಸ್ನೇಹಿತರಾಗಬೇಕಾದಾಗ ನಾಚಿಕೆ ಪಡಬೇಕಾದಂಥ ಪರಿಸ್ಥಿತಿ ತಂದುಕೊಳ್ಳಬೇಡಿ” ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಇನ್ನು ಪಶ್ಚಿಮ ಬಂಗಾಳದ ಪುರುಲಿಯಾ ಎಂಬಲ್ಲಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಮಮತಾ ಬ್ಯಾನರ್ಜಿ “ನಾನು ವೇತನವನ್ನಾಗಲೀ, ಪೆನ್ಷನ್ ಆಗಲಿ ತೆಗೆದುಕೊಳ್ಳುತ್ತಿಲ್ಲ. ನಾನು ಪುಸ್ತಕ ಬರೆಯುತ್ತೇನೆ, ಅವು ಉತ್ತಮವಾಗಿ ಮಾರಾಟವಾಗುತ್ತವೆ. ನಾನು ನನ್ನ ಪೇಂಟಿಂಗ್ ಗಳಿಗೂ ಹಣ ತೆಗೆದುಕೊಳ್ಳುವುದಿಲ್ಲ. ನಾನು ಸಾವಿರ ಕೋಟಿ ರೂ.ನಷ್ಟು ದುಡ್ಡು ಮಾಡಬಹುದು. ಆದರೆ ನನಗೆ ಹಣ ಬೇಕಿಲ್ಲ. ನಾನು ನನ್ನ ಪಕ್ಷವನ್ನೂ ಹಾಗೇ ನಡೆಸುತ್ತಿದ್ದೇನೆ. ಆದ್ದರಿಂದ ನರೇಂದ್ರ ಮೋದಿ ಬಂಗಾಳಕ್ಕೆ ಬಂದು ನನ್ನ ಪಕ್ಷ ಹಣವನ್ನು ಹೊಡೆಯುತ್ತದೆ ಎಂದಾಗ ಅವರಿಗೆ ಭ್ರಷ್ಟಾಚಾರದ ಕಪಾಳಮೋಕ್ಷ ಮಾಡಬೇಕು ಅನ್ನಿಸುತ್ತದೆ” ಎಂದಿದ್ದರು.
ಇದಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಉಂಟಾದ ಫೋನಿ ಚಂಡಮಾರುತದ ಸ್ಥಿತಿಗತಿ ವಿಚಾರಿಸಲು ಮಮತಾ ಬ್ಯಾನರ್ಜಿ ಅವರಿಗೆ ಸೌಜನ್ಯದ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನೂ ಅವರು ಸ್ವೀಕರಿಸಿರಲಿಲ್ಲ. ಎರಡು ಬಾರಿ ತಾವು ಕರೆ ಮಾಡಿದರೂ ಸ್ವೀಕರಿಸದಿರುವುದು ಮಮತಾ ಬ್ಯಾನರ್ಜಿ ಅವರ ದುರಹಂಕಾರಕ್ಕೆ ಸಾಕ್ಷಿ ಎಂದು ಮೋದಿ ಸಹ ಪ್ರತಿಕ್ರಿಯಿಸಿದ್ದರು.















