ಅನಾರೋಗ್ಯದ ನಡುವೆ 625 ಕ್ಕೆ 624 ಅಂಕಗಳಿಸಿದ ಬಂಗಾರಡ್ಕದ ಬಂಗಾರ ಸಿಂಚನಾ ಲಕ್ಷ್ಮೀ ; ಶಾಸಕರೂ ಸೇರಿ ಗಣ್ಯರಿಂದ ಶ್ಲಾಘನೆ – ಕಹಳೆ ನ್ಯೂಸ್

ಪುತ್ತೂರು : ಎಸ್ಎಸ್ಎಲ್ಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಪುತ್ತೂರಿನ ವಿದ್ಯಾರ್ಥಿನಿ ಮಾತ್ರ ತನ್ನ ಅಸಮಾನ್ಯ ಸಾಧನೆಯಿಂದ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಹೌದು, ಸಾಧನೆಗೆ ತಡೆ ಎನ್ನುವಂತಹ ದೇಹವನ್ನು ಬಾಧಿಸುತ್ತಿರುವ ಅನಾರೋಗ್ಯವಿದ್ದರೂ ಎಲ್ಲವನ್ನೂ ಮೆಟ್ಟಿ ನಿಂತು 625ಕ್ಕೆ 624 ಅಂಕಗಳನ್ನು ಪಡೆದ ಮಹಾ ಸಾಧನೆಯನ್ನು ಸಿಂಚನಾ ಲಕ್ಷ್ಮೀ ಮಾಡಿದ್ದಾಳೆ.

ಸಾಧಿಸಿದರೆ ಸಬಳ ನುಂಗಬಹದು ಎನ್ನುವುದನ್ನು ಸಿಂಚನಾ ಸಾಬೀತುಪಡಿಸಿದ್ದಾರೆ. ಬೆನ್ನುಹುರಿಯ ಸಮಸ್ಯೆಯಾಗಿರುವ ಸ್ಕೋಲಿಯೋಸಿಸ್ನಿಂದ ಬಳಲುತ್ತಿರುವ ಛಲದಂಕೆ ಸಿಂಚನಾ 624 ಅಂಕ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ಪುತ್ತೂರಿನ ಕೋಡಂಕೇರಿ ಬಂಗಾರಡ್ಕ ನಿವಾಸಿ ಕೃಷಿಕರಾಗಿರುವ ಮುರಳೀಧರಮತ್ತು ಶೋಭಾ ದಂಪತಿಯ ಪುತ್ರಿಯಾಗಿರುವ ಸಿಂಚನಾ , ವಿವೇಕಾನಂದ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್ನ ವಿದ್ಯಾರ್ಥಿನಿ . ಅಚ್ಚರಿಯೆಂದರೆ, ಸಿಂಚನಾಗೆ ಸ್ಕೋಲಿಯೋಸಿಸ್ಗಾಗಿ ಈಗಾಗಲೆ 6 ಬಾರಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಬೆನ್ನು ಹುರಿಯ ಕಸಿ ಮಾಡಲಾಗಿದ್ದು, ಚಿಕಿತ್ಸಾ ವೆಚ್ಚವಾಗಿ 25 ಲಕ್ಷಕ್ಕೂ ಹೆಚ್ಚು ಹಣವನ್ನು ವ್ಯಯಿಸಲಾಗಿದೆ. ದೈಹಿಕವಾಗಿ ಇತರರಿಗಿಂತ ಸಣಕಲಾಗಿರುವ ಈಕೆಯ ಸಾಧನೆ ಮಾತ್ರ ಬಹಳ ಎತ್ತರದ್ದು. ಸಾಧಿಸುವ ಛಲವಿದ್ದರೆ ಯಾವುದೂ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಸಿಂಚನಾ ಸಾಬೀತು ಮಾಡುವ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾಳೆ. ಅಕ್ಕ ಸಿಂಧೂರ ಸರಸ್ವತಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ.
ಶಾಸಕರಿಂದ ಅಭಿನಂದನೆ :

ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅವರು ಸಿಂಚನಾ ಅವರ ಸಾಧನೆಯನ್ನು ಕೊಂಡಾಡಿ ಅಭಿನಂದಿಸಿದ್ದಾರೆ.
ಕಹಳೆ ನ್ಯೂಸ್ ಸ್ಟುಡಿಯೋದಲ್ಲಿ ಸಿಂಚನಾ ವಿಶೇಷ Exclusive ಸಂದರ್ಶನ ವೀಕ್ಷಿಸಲು
https://youtu.be/7t9VUpLWpdY














