
ಪತ್ನಿ ಮೇಲೆ ಸಂಶಯಗೊಂಡು ಆಕೆಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಪತಿಯನ್ನು ಪೊಲೀಸರು ಬಂಧಿಸಿದ ಘಟನೆ ನಗರದ ಕಾವೂರು ಸಮೀಪದ ಕೊಂಚಾಡಿಯ ಬೋರುಗುಡ್ಡೆಯಲ್ಲಿ ನಡೆದಿದೆ. ಪತ್ನಿ ಮೇಲೆ ಸದಾ ಸಂಶಯ ವ್ಯಕ್ತಪಡಿಸುತ್ತಿದ್ದ ಪತಿ ಇದೇ ವಿಚಾರವಾಗಿ ಅವಳೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಸಹ ಹೀಗೆ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಆತ ಕೋಪದ ಭರದಲ್ಲಿ ಪತ್ನಿಗೆ ಚೂರಿಯಿಂದ ಇರಿದಿದ್ದಾನೆ. ಪತಿ ದಾಳಿಯಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದ ಪತ್ನಿ ಮೃತಪಟ್ಟಿದ್ದಾಳೆ. ಬಾಗಲಕೋಟೆ ಮೂಲದ ಮಂಜುಳಾ (35) ಹತ್ಯೆಯಾದ ಮಹಿಳೆಯಾಗಿದ್ದು, ಶರಣಪ್ಪ(45) ಚೂರಿಯಿಂದ ಇರಿದು ಕೊಂದ ವ್ಯಕ್ತಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪತ್ನಿಯನ್ನು ಹತ್ಯೆ ಮಾಡಿದ ಪತಿ ಇದೀಗ ಜೈಲು ಸೇರಿದ್ದು, ಇವರ ನಾಲ್ವರು ಮಕ್ಕಳು ಅನಾಥವಾಗಿವೆ.









