
ಬೆಳ್ತಂಗಡಿಯ ನಡ ಗ್ರಾಮದ ಇಚ್ಚಿಲ ಎಂಬಲ್ಲಿ ಡಂಪಿಂಗ್ ಯಾರ್ಡ್ಗೆ ನಿನ್ನೆ ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿ 2 ಎಕರೆಯಷ್ಟು ಪ್ರದೇಶ ಹಾನಿಗೀಡಾಗಿದೆ.
ತಕ್ಷಣ ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತು. ಆದರೆ ಅಗ್ನಿಶಾಮಕ ವಾಹನದಲ್ಲಿ ನೀರು ಖಾಲಿಯಾದ ಪರಿಣಾಮ ಬೆಂಕಿ ನಂದಿಸುವುದು ಕಷ್ಟಕರವಾಯಿತು.
ಬಳಿಕ ಸ್ಥಳೀಯರ ಸಹಾಯದಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಮ ಪಂಚಾಯತ್ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಲು ಸಹಕರಿಸಿದ್ದಾರೆ.
ಈ ತ್ಯಾಜ್ಯ ಘಟಕದ ಸಮೀಪ ಜನಸಂಖ್ಯೆ ವಿರಳವಾಗಿದ್ದು, ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಮತ್ತೊಂದೆಡೆ ಬಿಸಿಲಿನ ತೀವ್ರತೆಗೆ ತ್ಯಾಜ್ಯದಲ್ಲಿ ರಾಸಾಯನಿಕ ಉತ್ಪತ್ತಿಯಾದ ಪರಿಣಾಮ ಬೆಂಕಿ ಹತ್ತಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.














