
ನವದೆಹಲಿ: ಪಾಕಿಸ್ತಾನವು ಕೇವಲ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದವನ್ನು ಮಾಡುತ್ತಿಲ್ಲ, ಗುಪ್ತಚರ ದಳದ ಮಾಹಿತಿ ಪ್ರಕಾರ ಸಮುದ್ರ ಮಾರ್ಗದ ಮೂಲಕವೂ ಭಯೋತ್ಪಾದಕ ದಾಳಿಯನ್ನು ನಡೆಸಲು ಉಗ್ರರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಹೀಗಾಗಿ ನೌಕಾ ಸೇನೆಯು ಭಾರಿ ಎಚ್ಚರಿಕೆಯನ್ನು ವಹಿಸಿದ್ದು, ಯಾವುದೇ ದಾಳಿಯನ್ನು ಎದುರಿಸಲು ಅಥವಾ ಪ್ರತ್ಯುತ್ತರವನ್ನು ನೀಡಲು ಸಿದ್ಧವಾಗಿದೆ ಎಂದು ನೌಕಾ ಸೇನೆ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ತಿಳಿಸಿದ್ದಾರೆ.
ಪಾಕಿಸ್ತಾನಿ ಉಗ್ರರ ಈ ರೀತಿಯ ಬೆದರಿಕೆ ಅಥವಾ ಇಂತಹ ಭಯೋತ್ಪಾದನಾ ಕೃತ್ಯಗಳು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಇಂಡೋ ಫೆಸಿಫಿಕ್ ವಲಯದ ಸಾಕಷ್ಟು ರಾಷ್ಟ್ರಗಳ ಮೇಲೆ ಈ ಕರಿ ನೆರಳು ಆವರಿಸಿಕೊಂಡಿದೆ.
ಹಾಗೆಯೇ ಜಾಗತಿಕವಾಗಿಯೂ ಕೆಲವು ರಾಷ್ಟ್ರಗಳಲ್ಲಿ ಈ ಉಗ್ರವಾದದ ಬೇರೆ ಬೇರೆ ವಿಧಗಳು ಕಾಣಿಸುತ್ತಿವೆ. ಈ ಕಾರಣದಿಂದ ಭಾರತದ ಜೊತೆಗೆ ಉಗ್ರವಾದ ನಿಯಂತ್ರಣ ಹೋರಾಟದಲ್ಲಿ ಜೊತೆಗೆ ನಿಲ್ಲಬೇಕಿದೆ.
ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿ ಇನ್ನೂ ನಮ್ಮ ಕಣ್ಣಮುಂದಿದೆ, ೪೦ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಳ್ಳಬೇಕಾಯಿತು. ಅದಾದ ಬಳಿಕ ಭಾರತೀಯ ಸೇನೆ ಏರ್ಸ್ಟ್ರೈಕ್ ಮಾಡಿ ಜೈಷ್ ಅಡಗುತಾಣಗಳ ಮೇಲೆ ದಾಳಿ ಮಾಡಿ ಪ್ತತ್ಯುತ್ತರ ನೀಡಿತ್ತು.
ಇದೀಗ ಪಾಕಿಸ್ತಾನಿ ಉಗ್ರರು ಸಮುದ್ರದ ಮೂಲಕ ಆಕ್ರಮಣಕ್ಕೆ ಯತ್ನಿಸುತ್ತಿದ್ದು ಅದಕ್ಕೂ ನಾವು ಸಿದ್ಧರಿದ್ದೇವೆ ಎಂದು ಸುನಿಲ್ ಲಾಂಬಾ ತಿಳಿಸಿದ್ದಾರೆ.ಬಾಲಕೋಟ್ನ ದಾಳಿ ಬಳಿಕ ಕರಾಚಿ ಮೂಲಕ ದಾಳಿ ನಡೆಸುತ್ತದೆ ಎನ್ನುವ ಊಹಾಪೋಹವಿತ್ತು ಆದರೆ ಭಾರತ ನಿರಾಕರಿಸಿತ್ತು.














