
ನವದೆಹಲಿ: ಕರೂರ್ನಲ್ಲಿ 41 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ಮತ್ತು ನಟ ವಿಜಯ್ ಅವರು ಸಿಬಿಐ ಮುಂದೆ ಮೂರನೇ ಸುತ್ತಿನ ವಿಚಾರಣೆಗೆ ಹಾಜರಾದರು.
2025ರ ಸೆ.27 ರಂದು ತಮಿಳುನಾಡಿನ ವಿಧಾನಸಭಾ ಚುನಾವಣೆ ಪ್ರಚಾರ ಮಾಡುತ್ತಿದ್ದ ವಿಜಯ್ ರ್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ್ದರು. ವಿಜಯ್ ರ್ಯಾಲಿಯಲ್ಲಿ ಸುರಕ್ಷತಾ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ಆರೋಪಿಸಿವೆ.
ವಿಜಯ್ ರ್ಯಾಲಿಗೆ 7 ಗಂಟೆ ತಡವಾಗಿ ಬಂದಿದ್ದರು. 10,000 ಸಾಮರ್ಥ್ಯವಿರುವ ಸ್ಥಳದಲ್ಲಿ 27,000 ಜನರು ಜಮಾಯಿಸಿದ್ದರು. ಸ್ಥಳದಲ್ಲಿ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಕಾಲ್ತುಳಿತದ ಒಂದು ತಿಂಗಳ ನಂತರ ಟಿವಿಕೆ ಸ್ವತಂತ್ರ ತನಿಖೆಗಾಗಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಿಬಿಐ ತನಿಖೆಯನ್ನು ವಹಿಸಿಕೊಂಡಿತು. ‘ನಮ್ಮ ನಾಯಕರು ಕಾಲ್ತುಳಿತದ ತನಿಖೆಗೆ ಸಹಕರಿಸುತ್ತಾರೆ. ಇದು ಸತ್ಯವನ್ನು ಹೊರಗೆ ತರುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಟಿವಿಕೆ ತಿಳಿಸಿತ್ತು.
ಅಂದಿನಿಂದ, ಸಿಬಿಐ ವಿಜಯ್ ಅವರನ್ನು ವಿಚಾರಣೆ ನಡೆಸುತ್ತಿದೆ. ಕರೂರ್ ಕಾರ್ಯಕ್ರಮವನ್ನು ಯಾರು ಆಯೋಜಿಸಿದರು, ಕುಡಿಯುವ ನೀರು, ನೈರ್ಮಲ್ಯ ಮತ್ತು ಭದ್ರತೆಯ ವ್ಯವಸ್ಥೆಗಳ ಬಗ್ಗೆ ನಟನಿಗೆ ಮೊದಲೇ ತಿಳಿದಿತ್ತೆ, ಅವರು ಸ್ಥಳಕ್ಕೆ ತಡವಾಗಿ ಏಕೆ ಬಂದರು, ಜನಸಂದಣಿಯನ್ನು ನಿಯಂತ್ರಿಸಲು ಯಾವ ಪ್ರಯತ್ನಗಳನ್ನು ಮಾಡಲಾಯಿತು ಎಂಬ ಪ್ರಶ್ನೆಗಳನ್ನು ಮುಂದಿಡಲಾಯಿತು.













