
ಬೆಂಗಳೂರಿನ ದೊಡ್ಡಬಳ್ಳಾಪುರದ ಗೀತಂ ಕಾಲೇಜು ಬಳಿ ಹುಟ್ಟು ಹಬ್ಬಕ್ಕೆ ಬಿಯರ್ ಕುಡಿಯಲು ಹಣವಿಲ್ಲ ಎಂದು ಸ್ನೇಹಿತರ ಗುಂಪೊಂದು ದರೋಡೆ ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಆನಂದ, ಗಗನ್ ಗೌತಮ್, ತಿಲಕ್, ಆಕಾಶ್ ಮತ್ತು ಮುನೇಗೌಡ ಎಂದು ಗುರುತಿಸಲಾಗಿದೆ. ಈ ತಿಂಗಳ 11ರಂದು, ಮಧ್ಯರಾತ್ರಿ 1 ಗಂಟೆಗೆ ಆರೋಪಿಗಳು ತಮ್ಮ ಸ್ನೇಹಿತ ಆನಂದನ ಹುಟ್ಟುಹಬ್ಬದ ಸಂಭ್ರಮಚರಣೆಗೆ ಬಿಯರ್ ಕುಡಿಯಲು ಹಣವಿಲ್ಲದ ಎಂದು ದರೋಡೆ ಮಾಡಲು ಪ್ಲಾನ್ ಮಾಡಿದ್ದರು.
ಆರೋಪಿಗಳು ಕಂಠಪೂರ್ತಿ ಕುಡಿದು ರಸ್ತೆಯಲ್ಲಿದ್ದ ವ್ಯಕ್ತಿಗಳ ಕೈಯಿಂದ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ. ಅಲ್ಲದೇ ಹಸಿವು ಎಂದು ಮ್ಯಾಗಿ ತಿನ್ನಲು ಬಂದಿದ್ದವನ ಮೇಲೆ ಹಲ್ಲೆ ನಡೆಸಿ ಆತನ ಬಳಿಯಿದ್ದ ನಗದು ಹಾಗೂ ಫೋನ್ ಪೇ ಮೂಲಕ ಕೂಡ ಹಣ ಹಾಕಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ತಲೆಗೆ ಗಂಭೀರ ಗಾಯಗೊಂಡಿದ್ದ ಗಾಯಾಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ತಂಡದಿಂದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.














