ದೇಶದಲ್ಲಿ 250 ಮಿಲಿಯನ್ ಬ್ಯಾರಲ್ಗೂ ಹೆಚ್ಚು ಕಚ್ಚಾ ತೈಲ ಸಂಗ್ರಹ – ಇಂಧನ ಬಿಕ್ಕಟ್ಟು ವದಂತಿ ತಳ್ಳಿ ಹಾಕಿದ ಕೇಂದ್ರ -ಕಹಳೆ ನ್ಯೂಸ್

ನವದೆಹಲಿ: ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದ ದೇಶದಲ್ಲಿ ಇಂಧನ ಅಭಾವ ಉಂಟಾಗಿದೆ ಎಂಬ ವದಂತಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.
ಪೆಟ್ರೋಲ್ ಡಿಸೇಲ್ ಅಭಾವ, ದರ ಏರಿಕೆ ಬಗ್ಗೆ ವದಂತಿ ಬೇಡ. ಇಂಧನ ಅಭದ್ರತೆ ವದಂತಿಗಳನ್ನು ನಂಬಬೇಡಿ. ಭಾರತದಲ್ಲಿ 250+ ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹವಿದೆ. ಸುಮಾರು 50 ದಿನಗಳ ಪೂರೈಕೆಗೆ ಸನ್ನದ್ಧವಾಗಿದೆ. ಇಂಧನ ಅಭಾವ, ಬಿಕ್ಕಟ್ಟು ಎದುರಾಗುವುದಿಲ್ಲ ಈ ಬಗ್ಗೆ ಆತಂಕ ಬೇಡ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.
ಕಳೆದ 12 ವರ್ಷಗಳಿಂದ ದೇಶದ ಯಾವುದೇ ಪೆಟ್ರೋಲ್ ಬಂಕ್ಗಳು ಖಾಲಿಯಾಗಿಲ್ಲ. ಇಂಧನ ದರಗಳು ಸ್ಥಿರವಾಗಿವೆ. 40ಕ್ಕೂ ಹೆಚ್ಚು ದೇಶಗಳಿಂದ ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶೀಯ ಉತ್ಪಾದನೆಯೊಂದಿಗೆ ಭಾರತವು ಇಂಧನ ಕ್ಷೇತ್ರ ಹೆಚ್ಚು ಸುರಕ್ಷಿತವಾಗಿದೆ. ಪ್ರಸ್ತುತ ಭಾರತದ ತೈಲ ಆಮದಿನ ಕೇವಲ 40% ರಷ್ಟು ಮಾತ್ರ ಹಾರ್ಮುಜ್ ಜಲಸಂಧಿಯ ಮೂಲಕ ತರಲಾಗುತ್ತದೆ. ಉಳಿದ 60% ರಷ್ಟು ಇತರ ಅಂತಾರಾಷ್ಟ್ರೀಯ ಮಾರ್ಗಗಳ ಮೂಲಕ ಬರುತ್ತದೆ.
ಭಾರತವು ರಷ್ಯಾದಿಂದಲೂ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕಚ್ಚಾ ತೈಲದ ಕೊರತೆ ಉಂಟಾಗುವುದಿಲ್ಲ. ದೇಶದ ಇಂಧನ ಪೂರೈಕೆಯನ್ನು ಸುರಕ್ಷಿತವಾಗಿರಿಸಿದೆ ಎಂದು ಸರ್ಕಾರ ತಿಳಿಸಿದೆ.














