ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಆಪತ್ಭಾಂದವ :ಈ ವಾರವೇ 22 ಕೋಟಿ ಲೀಟರ್ ತೈಲ ಪೂರೈಕೆ – ಕಹಳೆ ನ್ಯೂಸ್

ನವದೆಹಲಿ/ಮಾಸ್ಕೋ: ಮಧ್ಯಪ್ರಾಚ್ಯದ ಯುದ್ಧದ ವಾತಾವರಣದಿಂದಾಗಿ ತೈಲ ಪೂರೈಕೆ ಮಾರ್ಗ ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದು ಭಾರತೀಯ ಸರಕು ಸಾಗಣೆ ವಲಯಕ್ಕೆ ಆರ್ಥಿಕ ಅಪಾಯ ತಂದೊಡ್ಡಿದೆ. 27 ಭಾರತೀಯ ಹಡಗುಗಳು ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, 10,000 ಕೋಟಿಗೂ ಅಧಿಕ ಮೌಲ್ಯದ ಸರಕು ಅಪಾಯದಲ್ಲಿದೆ. ಇದರಿಂದ ತೈಲ ಕೊರತೆ ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಮತ್ತೆ ಆಪತ್ಭಾಂದವನಾಗಿ ಬಂದಿದೆ. ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಹೆಚ್ಚಿಸಲು ರಷ್ಯಾ ಸಿದ್ಧವಾಗಿದೆ ಎಂದು ವರದಿಗಳು ತಿಳಿಸಿವೆ.
ಸುಮಾರು 95 ಮಿಲಿಯನ್ (9.5 ಕೋಟಿ) ಬ್ಯಾರೆಲ್ ರಷ್ಯನ್ ಕಚ್ಚಾ ತೈಲ ಈಗಾಗಲೇ ಭಾರತೀಯ ಸಮುದ್ರ ಗಡಿಯ ಸಮೀಪದಲ್ಲಿರುವ ಹಡಗುಗಳಲ್ಲಿ ಲಭ್ಯವಿದ್ದು, ಇದು ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದೆ. ಈ ಮೂಲಕ ಮಧ್ಯಪ್ರಾಚ್ಯದಿಂದ ಉಂಟಾದ ಪೂರೈಕೆ ವ್ಯತ್ಯಯ ಭಾಗಶಃ ಸಮತೋಲನಗೊಳಿಸಲು ಭಾರತಕ್ಕೆ ಸಾಧ್ಯವಾಗಬಹುದು ಎನ್ನಲಾಗುತ್ತಿದೆ.
ಇರದ ಮೊದಲ ಹಂತವಾಗಿ 14 ಲಕ್ಷ ಬ್ಯಾರಲ್ (22.25 ಕೋಟಿ ಲೀಟರ್) ಹೊತ್ತ 2 ತೈಲ ಟ್ಯಾಂಕರ್ಗಳು ಭಾರತದತ್ತ ಹೊರಟಿದ್ದು, ಈ ವಾರದಲ್ಲೇ ಭಾರತ ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ತೈಲ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳು ಕೇಂದ್ರ ಸರ್ಕಾರ ಈ ರೀತಿ ಕ್ರಮ ಕೈಗೊಂಡಿದೆ.
27 ಭಾರತೀಯ ಹಡಗುಗಳು ಲಾಕ್
ಭಾರತ ಸರ್ಕಾರಕ್ಕೆ ಇಂಡಿಯನ್ ನ್ಯಾಷನಲ್ ಶಿಪ್ ಓನರ್ಸ್ ಅಸೋಸಿಯೇಷನ್ ಪತ್ರ ಬರೆದಿದ್ದು, ಅದರಲ್ಲಿ 27 ಭಾರತೀಯ ಧ್ವಜವುಳ್ಳ ಹಡಗುಗಳು ಆ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮತ್ತು 10,000 ಕೋಟಿ ರೂಪಾಯಿಗಿಂತಲೂ ಅಧಿಕ ಮೌಲ್ಯದ ಸರಕು ಸಾಗಣೆ ಆಸ್ತಿಗೆ ಅಪಾಯ ಎದುರಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ.














