ಭಾರೀ ಹೈಡ್ರಾಮಾ : ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಬಂಧಿಸಲು ಶಿಮ್ಲಾಕ್ಕೆ ತೆರಳಿದ್ದ ದೆಹಲಿ ಪೊಲೀಸರೇ ವಶಕ್ಕೆ-ಕಹಳೆನ್ಯೂಸ್

ನವದೆಹಲಿ/ಶಿಮ್ಲಾ: ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ಎಐ ಇಂಪ್ಯಾಕ್ಟ್ ಶೃಂಗ ಸಭೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಬಂಧಿಸಿ, ಕರೆತರುವಾಗ ಭಾರೀ ನಾಟಕೀಯ ಬೆಳವಣಿಗೆ ನಡೆದಿದೆ. ಆರೋಪಿಗಳನ್ನ ಬಂಧಿಸಲು ಹಿಮಾಚಲ ಪ್ರದೇಶದ ಶಿಮ್ಲಾ ತೆರಳಿದ್ದ ದೆಹಲಿ ಪೊಲೀಸರನ್ನೇ ಶಿಮ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಎರಡೂ ಖಾಕಿ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಚರ್ಚೆಗೂ ಗ್ರಾಸವಾಗಿದೆ.
ನಂತರ ಬಂಧಿತ ಮೂವರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಶಿಮ್ಲಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಉಪಸ್ಥಿತರಿದ್ದರು.
ಏನಿದು ಹೈಡ್ರಾಮಾ?
ದೆಹಲಿಯಲ್ಲಿ ನಡೆದ ಇತ್ತೀಚೆಗೆ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಭಟನೆ ನಡೆಸಿದ್ದರು. ಈ ಬೆನ್ನಲ್ಲೇ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಇತರ ನಾಯಕರನ್ನ ಬಂಧಿಸಿದ್ದರು. ಇನ್ನುಳಿದ ಮೂವರು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರೋಹ್ರು ಪ್ರದೇಶದಲ್ಲಿ ಆಶ್ರಯ ಪಡೆಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದು ದೆಹಲಿ ಪೊಲೀಸರು ಆರೋಪಿಗಳನ್ನ ಪತ್ತೆ ಮಾಡಿ ಬಂಧಿಸಿದ್ದರು. ಬಳಿಕ ಬುಧವಾರ ತಡರಾತ್ರಿ ಶಿಮ್ಲಾದ ದೀನ್ಡಿಯಾಲ್ ಉಪಾಧ್ಯಾಯ ವಲಯ ಆಸ್ಪತ್ರೆಯಲ್ಲಿ ಮೂವರು ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಕರೆ ತರುತ್ತಿದ್ದರು. ಇದು ಭಾರೀ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಶಿಮ್ಲಾದ ಪೊಲೀಸರು, ಕೂಡಲೇ ಕ್ರಮ ಕೈಗೊಂಡಿದ್ದಾರೆ. ಧರ್ಮಪುರ ಬಳಿಯ ಚಂಡೀಗಡ- ಕಲ್ಕಾ- ಶಿಮ್ಲಾ ಹೆದ್ದಾರಿಯಲ್ಲಿ ಬ್ಯಾರಿಕೇಡ್ ನಿರ್ಮಿಸಿ ದೆಹಲಿ ಪೊಲೀಸರನ್ನ ತಡೆದಿದ್ದಾರೆ. ಅಲ್ಲದೆ 20 ರಷ್ಟಿದ್ದ ದೆಹಲಿ ಪೊಲೀಸರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿ, ಅವರ ವಾಹನಗಳನ್ನೂ ವಶಕ್ಕೆ ಪಡೆದುಕೊಂಡರು.
ನಂತರ ಶಿಮ್ಲಾ ಪೊಲೀಸರು, ಮೂವರು ಸಿಬ್ಬಂದಿ ಮಾತ್ರ ಆರೋಪಿಗಳನ್ನ ಕರೆದುಕೊಂಡು ರಾಜಧಾನಿಗೆ ಹಿಂತಿರುಗಬಹುದು. ಉಳಿದವರು ತಮ್ಮ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣದ ತನಿಖೆಗೆ ಸಹಾಯ ಮಾಡಲು ಶಿಮ್ಲಾದಲ್ಲಿಯೇ ಇರಬೇಕಾಗುತ್ತದೆ ಎಂದು ಹೇಳಿದ್ರು. ಜೊತೆಗೆ ವಶಕ್ಕೆ ಪಡೆದಿರುವ ಡಿವಿಆರ್ಗಳನ್ನು ಹಿಂದಿರುಗಿಸುವಂತೆ ಕೇಳಿದ್ರು. ಇದ್ಯಾವುದಕ್ಕೂ ಒಪ್ಪದ ದೆಹಲಿ ಪೊಲೀಸರು, ತಮ್ಮ ಯಾವುದೇ ಸಿಬ್ಬಂದಿಯನ್ನ ಹಿಂದೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದ್ರು. ಬಳಿಕ ಶೋಘಿ ಗಡಿಯಲ್ಲಿ ದೆಹಲಿ ಪೊಲೀಸರನ್ನೇ ವಶಕ್ಕೆ ಪಡೆಯಲಾಯಿತು. ಈ ಘರ್ಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ರಾಜಕೀಯ ಜಟಾಪಟಿಗೂ ಕಾರಣವಾಗಿದೆ.














