ಮಹಾಕಾಳಿಪಡ್ಡು ರೈಲ್ವೇ ಕ್ರಾಸಿಂಗ್ ಬಂದ್ , ಅಂಡರ್ ಪಾಸ್ ನಿರ್ಮಾಣದ ಬಳಿಕ ಹಳೆ ಕ್ರಾಸಿಂಗ್ಗೆ ಕಾಂಕ್ರೀಟ್ ತಡೆಗೋಡೆ – ಕಹಳೆ ನ್ಯೂಸ್

ಮಂಗಳೂರು : ಮಹಾಕಾಳಿಪಡ್ಡು ರೈಲ್ವೇ ಅಂಡರ್ ಪಾಸ್ನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ ಬೆನ್ನಿಗೇ ಈ ಹಿಂದೆ ಬಳಕೆಯಲ್ಲಿದ್ದ ರೈಲ್ವೇ ಕ್ರಾಸಿಂಗನ್ನು ರೈಲ್ವೇ ಇಲಾಖೆ ಶಾಶ್ವತವಾಗಿ ಬಂದ್ ಮಾಡಿದೆ.
ರೈಲ್ವೇ ಕ್ರಾಸಿಂಗ್ನ್ನು ಬಂದ್ ಮಾಡದಂತೆ ಸ್ಥಳೀಯರು ಮಾಡಿದ್ದ ಮನವಿಯನ್ನು ಮಾನ್ಯ ಮಾಡದ ಇಲಾಖೆ ಗೇಟ್ ಬಂದ್ ಮಾಡಿದ್ದಲ್ಲದೆ, ಹಳಿಯ ಎರಡೂ ಕಡೆಗಳಲ್ಲಿ ಸುಮಾರು ನಾಲ್ಕರಿಂದ ಐದು ಅಡಿಯ ತಡೆಗೋಡೆ ನಿರ್ಮಿಸಿದೆ.
ನೂತನ ಅಂಡರ್ಪಾಸ್ ನಲ್ಲಿ ನೀರು ಸಂಗ್ರಹವಾಗಿ ಮಳೆಗಾಲದಲ್ಲಿ ಸಂಚರಿಸಲು ಅನಾನುಕೂಲವಾಗುವ ಆತಂಕವಿದೆ. ಪ್ರಸ್ತುತ ಅಂಡರ್ಪಾಸ್ ಬಳಿಯಲ್ಲಿ ನೀರು ಸಂಗ್ರಹವಾಗಿದ್ದು, ಮಳೆಗಾಲದಲ್ಲಿ ಸಂಪೂರ್ಣ ನೀರಿನಿಂದ ಆವೃತಗೊಳ್ಳುವ ಭೀತಿ ಸ್ಥಳೀಯರದ್ದು. ಈ ಹಿನ್ನೆಲೆಯಲ್ಲಿ ಮುಂದಿನ ಮಳೆಗಾಲದ ವರೆಗಾದರೂ ರೈಲ್ವೇ ಕ್ರಾಸಿಂಗ್ ಉಳಿಸುವಂತೆ ರೈಲ್ವೇ ಇಲಾಖೆ ಹಾಗೂ ಸಂಸದರಿಗೆ ಮನವಿ ಮಾಡಲಾಗಿತ್ತು. ಆದರೆ ಸ್ಥಳೀಯರ ಮನವಿಗೆ ಇಲಾಖೆ ಸೊಪ್ಪು ಹಾಕಿಲ್ಲ.
ಪ್ರಸ್ತುತ ಹಿಂದೆ ಇದ್ದ ಗೇಟನ್ನು ಬಂದ್ ಮಾಡಿಟ್ಟು ಅದಕ್ಕೆ ಬೀಗ ಹಾಕಿ ಇಡುವಂತೆ ಸ್ಥಳೀಯರ ಆಗ್ರಹವಾಗಿತ್ತು. ಮುಂದಿನ ಮಳೆಗಾಲವನ್ನು ಪರಿಶೀಲಿಸಿದ ಬಳಿಕ ಕ್ರಮ ವಹಿಸುವಂತೆ ತಿಳಿಸಲಾಗಿತ್ತು. ಅದಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈಗ ತಡೆಗೋಡೆ ನಿರ್ಮಿಸಲಾಗಿದೆ.
ಈ ಹಿಂದೆ ಮಳೆ ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಮಹಾಕಾಳಿಪಡ್ಡು ಹೊಸ ಅಂಡರ್ಪಾಸ್ ಕೆಲಸ ಕಾರ್ಯವನ್ನು ಅಂದುಕೊಂಡಂತೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ವಿಪರೀತ ನೀರಿನ ಒರತೆ ಇರುವ ಕಾರಣ ಹಿಂದಿನ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಪಕ್ಕದಲ್ಲೇ ಕೆರೆಯೂ ಕೂಡ ಇದ್ದು, ಕೆರೆಯ ಹೆಚ್ಚಿನ ಪ್ರಮಾಣದ ನೀರು ಅಂಡರ್ಪಾಸ್ ನತ್ತ ಬರುತ್ತಿದೆ. ಇತ್ತ ಅಂಡರ್ಪಾಸ್ನಲ್ಲಿ ಸಂಗ್ರಹವಾಗುವ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಇಲ್ಲದ ಕಾರಣ ಅಂಡರ್ಪಾಸ್ ಜಾಗದಲ್ಲೇ ನೀರು ಸಂಗ್ರಹವಾಗಿತ್ತು. ಇದೀಗ ಕಾಮಗಾರಿ ಪೂರ್ಣವಾಗಿ ವಾಹನ ಸಂಚಾರ ಶುರುವಾಗಿದೆ. ಮಳೆಗಾಲದಲ್ಲಿ ಇಲ್ಲಿನ ಪರಿಸ್ಥಿತಿ ಹೇಗಾಗಬಹುದು ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ.
ಬೈಟ್ ,ನಿತಿನ್ ಕಾಮತ್ ,ಸ್ಥಳೀಯ ನಿವಾಸಿ














