ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ಶವವಾಗಿ ಪತ್ತೆ : ಪೋಷಕರಿಂದ ತುರ್ತು ವೀಸಾಗೆ ಅರ್ಜಿ- ಕಹಳೆ ನ್ಯೂಸ್

ಕ್ಯಾಲಿಫೋರ್ನಿಯಾ: ಉನ್ನತ ವ್ಯಾಸಂಗಕ್ಕೆ ಅಮೆರಿಕಗೆ ತೆರಳಿದ್ದ ಕನ್ನಡಿಗ ವಿದ್ಯಾರ್ಥಿ ಕ್ಯಾಲಿಫೋರ್ನಿಯಾದಲ್ಲಿ ಶವವಾಗಿ ಪತ್ತೆಯಾದ ಪ್ರಕರಣ ಸಂಬಂಧ ವಿದ್ಯಾರ್ಥಿ ಸಾಕೇತ್ ಪೋಷಕರು ಅಮೆರಿಕಗೆ ತೆರಳುವ ಸಲುವಾಗಿ ತುರ್ತು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಶವವಾಗಿ ಪತ್ತೆಯಾಗಿದ್ದಾನೆ. ಕರ್ನಾಟಕ ಮೂಲದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ, ಮದ್ರಾಸ್ ಐಐಟಿಯಲ್ಲಿ ಪದವಿ ಪಡೆದಿದ್ದ. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಆಣ್ವಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಆಗಿದ್ದ. ಆದರೆ ಕಳೆದ ಸೋಮವಾರದಿಂದ ಸಾಕೇತ್ ನಾಪತ್ತೆಯಾಗಿದ್ದ. ಆದರೀಗ ಸಾಕೇತ್ ಮೃತದೇಹ ಪತ್ತೆಯಾಗಿರುವುದರ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.

ಸಾಕೇತ್ ಕಣ್ಮರೆಯಾದ ನಂತರ ಟಿಲ್ಡೆನ್ ಪ್ರಾದೇಶಿಕ ಉದ್ಯಾನವನದ ಬಳಿಯ ಮನೆಯ ಬಳಿ ಪಾಸ್ಪೋರ್ಟ್ ಮತ್ತು ಲ್ಯಾಪ್ಟಾಪ್ ಹೊಂದಿದ್ದ ಬ್ಯಾಗ್ ಪತ್ತೆಯಾಗಿತ್ತು. ಲೇಕ್ ಅಂಜಾ, ಬರ್ಕ್ಲಿ ಹಿಲ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪೊಲೀಸರು ನಡೆಸಿದ್ದರು. ಇದೀಗ ಸಾಕೇತ್ ಅವರ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿರೋದಾಗಿ ರಾಯಭಾರಿ ಕಚೇರಿ ದೃಢಪಡಿಸಿದೆ.
ಇನ್ನು ಅಮೆರಿಕಗೆ ತೆರಳಲು ಸಾಕೇತ್ ಕುಟುಂಬಸ್ಥರು ತುರ್ತು ವೀಸಾಗೆ ಅಪ್ಲೈ ಮಾಡಿದ್ದು, ಕ್ಯಾಲಿಫೋರ್ನಿಯಾಗೆ ತೆರಳಿ ಮಗನ ಗುರುತು ಪತ್ತೆ ಹಚ್ಚಲಿದ್ದಾರೆ. ನಾಗರಬಾವಿಯಲ್ಲಿ ಸಾಕೇತ್ ನಿವಾಸ ಇದ್ದು, ಸಾಕೇತ್ ತಂದೆ-ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಶಾಕ್ಗೆ ಒಳಗಾಗಿರುವ ಕುಟುಂಬಸ್ಥರು ಖುದ್ದಾಗಿ ಹೋಗಿ ಮಗನ ಗುರುತು ಪತ್ತೆ ಹಚ್ಚುವವರೆಗೂ ನಾವು ಮಗನ ಸಾವನ್ನು ನಂಬಲ್ಲ ಎಂದಿದ್ದಾರೆ.














