
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯಲ್ಲಿರುವ ಕೇಂದ್ರ ಸಚಿವ ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಹಬ್ಬದಲ್ಲಿ ಭಾಗಿಯಾಗಿ ತಮಿಳುನಾಡು ಮತ್ತು ವಿದೇಶದಲ್ಲಿರುವ ತಮಿಳರಿಗೆ ಪೊಂಗಲ್ ಶುಭಾಶಯ ಕೋರಿದ್ದಾರೆ.
ಎಲ್.ಮುರುಗನ್ ಅವರ ನಿವಾಸದ ಪೊಂಗಲ್ ಆಚರಣೆಯಲ್ಲಿ ಅತಿಥಿಯಾಗಿ ಭಾಗಿಯಾದ ಪ್ರಧಾನಿ ಸ್ವತಃ ತಾವೇ ವಿಶೇಷ ಪೂಜೆ ಮಾಡಿ, ಪೊಂಗಲ್ ತಯಾರಿಸಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ರಾಮಮೋಹನ್ ನಾಯ್ಡು ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಿದ್ದರು.
ಈ ಕುರಿತು ಎಕ್ಸ್ನಲ್ಲಿ ಪತ್ರ ಬರೆದು ಹಂಚಿಕೊಂಡು ಶುಭಕೋರಿರುವ ಅವರು, ಆತ್ಮೀಯ ಸಹ ನಾಗರಿಕರೇ ವನಕ್ಕಂ! ಪೊಂಗಲ್ ಹಬ್ಬದ ಸಂತೋಷದ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ವಿಶೇಷ ಹಬ್ಬವು ಮಾನವ ಶ್ರಮ ಮತ್ತು ಪ್ರಕೃತಿಯ ಲಯಗಳ ನಡುವಿನ ನಿಕಟ ಸಂಬಂಧವನ್ನು ನಮಗೆ ನೆನಪಿಸುತ್ತದೆ ಎಂದು ಹೇಳಿದ್ದಾರೆ.
ಇದು ಕೃಷಿ, ಶ್ರಮಶೀಲ ರೈತರು, ಗ್ರಾಮೀಣ ಜೀವನ ಮತ್ತು ಕೆಲಸದ ಘನತೆಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದ ಹಬ್ಬವಾಗಿದೆ .ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸಲು ಮತ್ತು ಸಂತೋಷ ಮತ್ತು ಸದ್ಭಾವನೆಯನ್ನು ಹಂಚಿಕೊಳ್ಳಲು ಕುಟುಂಬಗಳು ಒಂದುಗೂಡುತ್ತವೆ.ತಲೆಮಾರುಗಳ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಭಾರತ ವಿಶ್ವದ ಅತ್ಯಂತ ಹಳೆಯ ಭಾಷೆಯಾದ ತಮಿಳು ಭಾಷೆಯ ತವರು ಎಂಬ ಅಂಶದ ಬಗ್ಗೆ ಹೆಮ್ಮೆ ಇದೆ. ಪೊಂಗಲ್ ಜಾಗತಿಕ ಹಬ್ಬವಾಗಿ ಹೊರಹೊಮ್ಮುವುದನ್ನು ನೋಡಲು ಸಂತೋಷವಾಗುತ್ತದೆ. ಮತ್ತೊಮ್ಮೆ, ನಿಮಗೆ ಪೊಂಗಲ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ಪ್ರತಿಯೊಬ್ಬರ ಜೀವನಕ್ಕೂ ಸಮೃದ್ಧಿ, ಯಶಸ್ಸು ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಹಾರೈಸಿದ್ದಾರೆ.














