ಸರ್ಕಾರದ ಹಿಂದೂ ವಿರೋಧಿ ‘ದ್ವೇಷ ಭಾಷಣ ತಡೆ ಕಾಯಿದೆ’ ಮತ್ತು ಬಾಂಗ್ಲಾದೇಶದ ಹಿಂದೂ ಹತ್ಯಾಕಾಂಡದ ವಿರುದ್ಧ ಹಿಂದೂಗಳ ಗರ್ಜನೆ ! : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರಾಜ್ಯಪಾಲರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ತುರ್ತು ಕ್ರಮಕ್ಕಾಗಿ ಆಗ್ರಹ -ಕಹಳೆ ನ್ಯೂಸ್

ಪುತ್ತೂರು: ಒಂದು ಕಡೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಕಾನೂನಿನ ಹೆಸರಿನಲ್ಲಿ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಸಂಚು ರೂಪಿಸುತ್ತಿದ್ದರೆ, ಇನ್ನೊಂದೆಡೆ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆ. ಈ ಎರಡೂ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಹಿಂದೂ ಜನಜಾಗ್ರತಿ ಸಮಿತಿಯು, ಹಿಂದೂ ಸಮಾಜದ ರಕ್ಷಣೆಗಾಗಿ ರಾಜ್ಯದ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದೆ.
ಕರ್ನಾಟಕ ಸರ್ಕಾರದ ‘ದ್ವೇಷ ಭಾಷಣ ತಡೆ ಕಾಯಿದೆ-2025’ ವಿರುದ್ಧ ಸಮರ !
ಹಿಂದೂ ಸಂಘಟನೆಗಳನ್ನು ದಮನಿಸಲು ಸರ್ಕಾರದ ಕುತಂತ್ರ: ರಾಜ್ಯಪಾಲರೇ, ಮಸೂದೆಗೆ ಅಂಕಿತ ಹಾಕಬೇಡಿ ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ತರಾತುರಿಯಲ್ಲಿ ಅಂಗೀಕರಿಸಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಕಾಯಿದೆ-2025’ ಕೇವಲ ಹಿಂದೂ ಸಂಘಟನೆಗಳನ್ನು ದಮನಿಸುವ ಷಡ್ಯಂತ್ರವಾಗಿದೆ ಎಂದು ಸಮಿತಿ ಕಿಡಿಕಾರಿದೆ.
* ಸತ್ಯ ಹೇಳಿದರೂ ಜೈಲು: ಈ ಕಾಯಿದೆಯಲ್ಲಿ ಸತ್ಯ ಸಂಗತಿಗಳನ್ನು ಹೇಳುವುದು ರಕ್ಷಣೆಯಲ್ಲ (Truth is NOT a defence). ಲವ್ ಜಿಹಾದ್, ಮತಾಂತರದಂತಹ ಸತ್ಯಗಳನ್ನು ಬಿಚ್ಚಿಟ್ಟರೆ ‘ಭಾವನೆಗೆ ಧಕ್ಕೆ’ ಎಂಬ ನೆಪದಲ್ಲಿ ಹಿಂದೂಗಳನ್ನು ಜೈಲಿಗಟ್ಟುವ ಸಂಚು ಇದರಲ್ಲಿದೆ.
* ಜಾಮೀನು ರಹಿತ ದೌರ್ಜನ್ಯ: ಅಸ್ಪಷ್ಟ ವ್ಯಾಖ್ಯಾನಗಳ ಮೂಲಕ ಹಿಂದೂ ನಾಯಕರು, ಸಂತರು ಮತ್ತು ಸಾಮಾಜಿಕ ಜಾಲತಾಣದ ಕಾರ್ಯಕರ್ತರನ್ನು ಗುರಿಯಾಗಿಸಿ ಜಾಮೀನು ರಹಿತ ಬಂಧನ ಮಾಡುವ ಪಿತೂರಿ ಇದಾಗಿದೆ.
* ಧರ್ಮ ದಮನ: ಗೋಹತ್ಯೆ ತಡೆ ಅಥವಾ ಧರ್ಮ ಜಾಗೃತಿಯ ಸಂದೇಶಗಳನ್ನೂ ‘ದ್ವೇಷ’ ಎಂದು ಬಿಂಬಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಈ ಕರಾಳ ಕಾಯಿದೆಗೆ ಮಾನ್ಯ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಸಮಿತಿ ಆಗ್ರಹಿಸಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯಾಕಾಂಡದ ವಿರುದ್ಧ ತೀವ್ರ ಖಂಡನೆ ! ಬಾಂಗ್ಲಾದೇಶದ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿ; ಮತೀಯ ಗೂಂಡಾಗಳ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರಕ್ಕೆ ಮನವಿ
ಬಾಂಗ್ಲಾದೇಶದ ಮೈಮನ್ಸಿಂಗ್ನಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆಯನ್ನು ಸಮಿತಿಯು ತೀವ್ರವಾಗಿ ಖಂಡಿಸಿದೆ. ೧೯೪೧ ರಲ್ಲಿ ೨೮% ಇದ್ದ ಹಿಂದೂ ಜನಸಂಖ್ಯೆ ಇಂದು ೭.೮% ಕ್ಕೆ ಕುಸಿದಿರುವುದು ವ್ಯವಸ್ಥಿತ ಹಿಂದೂ ನಿರ್ಮೂಲನೆಯ ಸಂಕೇತವಾಗಿದೆ.
* ಪ್ರಧಾನಿ ಮೋದಿಯವರಿಗೆ ಮನವಿ: ಭಾರತ ಸರ್ಕಾರವು ಬಾಂಗ್ಲಾದೇಶದ ಮೇಲೆ ತಕ್ಷಣವೇ ಆರ್ಥಿಕ, ವ್ಯಾಪಾರಿಕ ಮತ್ತು ರಾಜಕೀಯ ನಿರ್ಬಂಧಗಳನ್ನು ಹೇರಬೇಕು.
* ಮಿಲಿಟರಿ ಕ್ರಮದ ಬೇಡಿಕೆ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆ, ದೇವಸ್ಥಾನಗಳ ಮೇಲೆ ದಾಳಿ ಮಾಡುತ್ತಿರುವ ಮತೀಯ ಉಗ್ರ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕು.
* ಅಂತರರಾಷ್ಟ್ರೀಯ ಹಸ್ತಕ್ಷೇಪ: ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಆಯೋಗದ ಮೂಲಕ ‘ಫ್ಯಾಕ್ಟ್-ಫೈಂಡಿಂಗ್ ಮಿಷನ್’ ನಡೆಸಿ ಅಲ್ಲಿನ ಹಿಂದೂಗಳಿಗೆ ಪುನರ್ವಸತಿ ಮತ್ತು ಭದ್ರತೆ ಒದಗಿಸಬೇಕೆಂದು ಸಮಿತಿ ಒತ್ತಾಯಿಸಿದೆ.
ಅಸಂವಿಧಾನಿಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ ಕಾಯ್ದೆಗೆ ಅನುಮತಿ ನೀಡಬಾರದು ಹಾಗೂ ಬಾಂಗ್ಲಾ ಹಿಂದೂ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಲು ಭಾರತ ಸರಕಾರ ದಿಂದ ಕಠಿಣ ರಾಜಕೀಯ ಹಸ್ತಕ್ಷೇಪ ಹಾಗೂ ಅಂತಾರಾಷ್ಟ್ರೀಯ ಒತ್ತಡ ಹೇರುವಂತೆ ಆಗ್ರಹಿಸಿ ಪುತ್ತೂರಿನ ಉಪ ವಿಭಾಗಾಧಿಕಾರಿ ಕಚೇರಿಯ ಉಪ ತಹಸಿಲ್ದಾರರಾದ ಶ್ರೀ ನಾಗೇಂದ್ರ ಇವರ ಮೂಲಕ ರಾಜ್ಯಪಾಲರಿಗೆ ಮತ್ತು ಪ್ರಧಾನಿಯವರಿಗೆ ಮನವಿಯನ್ನು ನೀಡಲಾಯಿತು.
ಹಿಂದೂ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿರುವ ಈ ಎರಡು ಗಂಭೀರ ವಿಚಾರಗಳಲ್ಲಿ ಸರ್ಕಾರಗಳು ವಿಫಲವಾದರೆ ಹಿಂದೂ ಸಮಾಜವು ಬೀದಿಗೆ ಇಳಿದು ಹೋರಾಟ ಮಾಡಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯು ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಧರ್ಮ ಪ್ರೇಮಿಗಳಾದ ಶ್ರೀ ಪ್ರಸನ್ನ ಬಲ್ಲಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರು ಬೋಳುವಾರು, ಶ್ರೀ ಸತೀಶ್ ಭಜನಾ ಮಂದಿರದ ಅಧ್ಯಕ್ಷರು ಕರವೇಲು, ಶ್ರೀಬಾಲಸುಬ್ರಹ್ಮಣ್ಯ ಭಟ್, ಶ್ರೀ ಚಂದ್ರಶೇಖರ್ ಪಾಟಲಿ, ಶ್ರೀ ದಿವಾಕರ್ ರೈ ಪಾಲ್ತಾಡಿ, ಶ್ರೀ ಶ್ರೀಧರ ಬನ್ನೂರು, ಶ್ರೀ ನಿತೇಶ್ ಆಚಾರ್ಯ, ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಾದ ಶ್ರೀ ಹರಿಪ್ರಸಾದ್ ಶೆಟ್ಟಿ ಪುತ್ತೂರು, ಶ್ರೀ ಚಂದ್ರಶೇಖರ್ ಪಣಿತೋಟ, ಶ್ರೀ ಬಾಲಕೃಷ್ಣ ಶೆಟ್ಟಿ ನೆಲ್ಯಾಡಿ, ಶ್ರೀ ದಾಮೋದರ ಗೌಡ ಇವರೆಲ್ಲರು ಉಪಸ್ಥಿತರಿದ್ದರು.













