
ಚಿತ್ರದುರ್ಗ : ಚಿತ್ರದುರ್ಗದ ಹಿರಿಯೂರು ಬಳಿ ಬೆಳ್ಳಂ ಬೆಳಿಗ್ಗೆ ದುರಂತವೊಂದು ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಗಿ ಬಸ್ಗೆ ಬೆಂಕಿ ತಗುಲಿದ ಪರಿಣಾಮ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ನೋಡ ನೋಡುತ್ತಿದ್ದಂತೆಯೇ ಸುಟ್ಟು ಭಸ್ಮವಾಗಿದ್ದಾರೆ.
ಹೌದು ಬೆಂಗಳೂರಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್ನಲ್ಲಿ ಡ್ರೈವರ್ ಕಂಡಕ್ಟರ್ ಸೇರಿ 30 ಜನ ಪ್ರಯಾಣಿಸುತ್ತಿದ್ದರು. ಆದರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜವನಗೊಂಡಹಳ್ಳಿ ಬಳಿ ಬಸ್ ಅತೀ ವೇಗವಾಗಿ ಕಂಟೇನರ್ಗೆ ಡಿಕ್ಕಿ ಹೊಡೆದಿದ್ದು ನೋಡ ನೋಡುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಕೆನ್ನಾಲಿಗೆಗೆ ಬಸ್ನಲ್ಲಿದ್ದ 20ಕ್ಕೂ ಅಧಿಕ ಮಂದಿ ಸುಟ್ಟು ಕರಕಲಾಗಿದ್ದಾರೆನ್ನಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಕಿ ತಗುಲಿದ ಬೆನ್ನಿಗೇ ಕೆಲ ಪ್ರಯಾಣಿಕರು ಇಳಿದಿದ್ದಾರೆ. ಆದರೆ ಅಷ್ಟರಲ್ಲೇ ಬೆಂಕಿ ಹರಡಿಕೊಂಡಿದ್ದು, ಅಧಿಕ ಮಂದಿ ಇದರಲ್ಲಿ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. ಇನ್ನು ಅಪಘಾತದ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುತ್ತಿದ್ದಾರೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಕ್ಷಣಾರ್ಧದಲ್ಲಿ ಹೊತ್ತಿಕೊಂಡ ಬೆಂಕಿ
ರಾತ್ರಿ 12 ಗಂಟೆಗೆ ಬೆಂಗಳೂರಿನಿಂದ ಗೋಕರ್ಣದತ್ತ ತೆರಳುತ್ತಿದ್ದ ಈ ಬಸ್ ರಾತ್ರಿ 2:45 ರ ಸುಮಾರಿಗೆ ಕಂಟೈನರ್ಗೆ ಡಿಕ್ಕಿ ಹೊಡೆದಿದೆ. ಕ್ಷಣಮಾತ್ರದಲ್ಲೇ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಮಂದಿ ಅಷ್ಟರಲ್ಲಾಗಲೇ ನಿದ್ದೆಗೆ ಜಾರಿದ್ದರು. ಅಲ್ಲದೇ ಏಕಾಏಕಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಕೇವಲ 10 ಮಂದಿ ಮಾತ್ರ ಇಳಿಯಲು ಸಾಧ್ಯವಾಗಿದೆ. ಅವರಲ್ಲೂ ಬಹುತೇಕರಿಗೆ ಸುಟ್ಟ ಗಾಯಗಳಾಗಿವೆ ಎನ್ನಲಾಗಿದೆ.














