
ಹೊಸ ಚಂಡಮಾರುತದ (Cyclone) ಪರಿಣಾಮ ಇದೀಗ ಕರ್ನಾಟಕಕ್ಕೂ (Karnataka) ತಟ್ಟುವಂತೆ ಕಾಣುತ್ತಿದೆ. ಅದಕ್ಕೂ ಮೊದಲೂ ಬಂಗಾಳಕೊಲ್ಲಿಯಲ್ಲಾಗಿರುವ ವಾಯುಭಾರ ಕುಸಿತದ ಪರಿಣಾ, ಕರ್ನಾಟಕದಲ್ಲಿ ಮುಂದಿನ 2 ದಿನಗಳವರೆಗೆ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕಳೆದೊಂದು ವಾರದಿಂದ ಬೆಂಗಳೂರು ಸೇರಿ ಮೋಡಕವಿದ ವಾತಾರವರಣವಿದ್ದು, ಅಲ್ಲದೇ ಅಲ್ಲಲ್ಲಿ ಮಳೆಯೂ ಆಗಿದೆ. ಆದರೆ ಇದೀಗ ಮುಂದಿನ ಎರಡು ದಿನ ಮತ್ತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ (Heavy Rain) ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಾಗಿರುವ ವಾಯುಭಾರ ಕುಸಿತದಿಂದಾಗಿ ಕಡಿಮೆ ಒತ್ತಡ ಮತ್ತು ಸುತ್ತಮುತ್ತ ಬೀಸುವ ಗಾಳಿಯಿಂದಾಗಿ ಈ ಮಳೆಗೆ ಪ್ರಮುಖ ಕಾರಣವಾಗಿದೆ.
ವಾಯುಭಾರ ಕುಸಿತದಿಂದಾಗಿ ದಕ್ಷಿಣ ಮತ್ತು ದಕ್ಷಿಣ ಪೂರ್ವ ದಿಕ್ಕಿನಿಂದ ತೇವಭರಿತ ಗಾಳಿಯಿಂದಾಗಿ, ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ, ಕೆಲವು ಜಿಲ್ಲೆಗಳಲ್ಲಿ ಭಾರೀ ಗಾಳಿ-ಮಳೆಯಾಗುವ ನಿರೀಕ್ಷೆಯಿದೆ.
ಈ ಜಿಲ್ಲೆಗಳಲ್ಲಿ ಭಾರೀ ಮಳೆ!
ಹವಾಮಾನ ಇಲಾಖೆಯ ಸೂಚನೆಯ ಪ್ರಕಾರ, ಶುಕ್ರವಾರ ಮತ್ತು ಶನಿವಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಹೇಳಲಾಗಿದೆ. ಅಲ್ಲದೇ ಈ ಆರು ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಭಾರೀ ಮಳೆಯಾಗಬಹುದು. ಕೆಲವು ಕಡೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ, ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಸೂಚನೆ ಹೊರಡಿಸಲಾಗಿದೆ.
ತಮಿಳುನಾಡು, ಕೇರಳದಲ್ಲೂ ಭಾರೀ ಮಳೆ:
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಗುರುವಾರ ಸಂಜೆಯ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಮುಂದಿನ ಐದು ದಿನಗಳ ಕಾಲ ಕೇರಳದಲ್ಲಿ ಹಗುರದಿಂದ ಭಾರೀ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಗುರುವಾರದಿಂದ ಶನಿವಾರದವರೆಗೆ ಕೇರಳದ ಹಲವಾರು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಅದರಂತೆ, ತಿರುವನಂತಪುರಂ ಜಿಲ್ಲೆಗೂ ಗುರುವಾರವೇ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿತ್ತು.
ಚೆನ್ನೈನಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರ (RMC) ವರದಿ ಪ್ರಕಾರ, ಈ ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ನೈರುತ್ಯ ಬಂಗಾಳಕೊಲ್ಲಿ ಮತ್ತು ಶ್ರೀಲಂಕಾ ಕರಾವಳಿಯುದ್ದಕ್ಕೂ ಚಲಿಸಿ, ಭಾನುವಾರ ವೇಳೆಗೆ ಉತ್ತರ ತಮಿಳುನಾಡು, ಪುದುಚೇರಿ ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶವನ್ನು ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.
ಆರ್ಎಂಸಿ ತನ್ನ ಹಿಂದಿನ ಮುನ್ಸೂಚನೆ ಮತ್ತೆ ಹೇಳಿಕೆ ನೀಡಿದ್ದು, ಗುರುವಾರ ದಕ್ಷಿಣ ತಮಿಳುನಾಡು ಮತ್ತು ಡೆಲ್ಟಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹೇಳಲಾಗಿದೆ. ಶುಕ್ರವಾರದಿಂದ ರಾಜ್ಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಸೂಚನೆ ಹೊರಡಿಸಲಾಗಿದೆ.
ತಮಿಳುನಾಡಿನ ತಂಜಾವೂರು, ತಿರುವರೂರು, ನಾಗಪಟ್ಟಣಂ ಮತ್ತು ಮೈಲಾಡುತುರೈಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಈ ಪರಿಣಾಮ ಮುಂದಿನ 24 ಗಂಟೆಗಳಲ್ಲಿ 20 ಸೆಂ.ಮೀ.ಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಚೆನ್ನೈ, ತಿರುವಲ್ಲೂರು, ರಾಣಿಪೇಟೆ, ಕಾಂಚಿಪುರಂ ಮತ್ತು ಚೆಂಗಲ್ಪಟ್ಟು ಸೇರಿದಂತೆ ಸುತ್ತಮುತ್ತಲಿನ 5 ಜಿಲ್ಲೆಗಳಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.














