
ಚಿಕ್ಕಮಗಳೂರು ಜಿಲ್ಲೆಯ ಮಾಗಡಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿತು. ಅದೃಷ್ಟವಶಾತ್, ಕಾರಿನಲ್ಲಿದ್ದವರು ಈಜಿ ದಡ ಸೇರಿದರು. ಆದರೆ ಕಾರಿನಲ್ಲಿದ್ದ ಸುಮಾರು ₹50 ಲಕ್ಷ ಮೌಲ್ಯದ ಚಿನ್ನಾಭರಣಗಳು ನೀರಿನಲ್ಲಿ ಮುಳುಗಿದವು. ಇದೀಗ ಈಶ್ವರ್ ಮಲ್ಪೆ ಅವರು ಆ ಚಿನ್ನವನ್ನು ಹುಡುಕಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಾಗಡಿ ಬಳಿ ಮಂಗಳವಾರ ಸಂಜೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಬಿದ್ದಿತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ಅಂಗಡಿಯ ಮಾಲೀಕ ಈಜಿ ದಡ ಸೇರಿದರು. ಬಳಿಕ ಕ್ರೇನ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಲಾಯಿತು.
ಆದರೆ ಕಾರಿನಲ್ಲಿದ್ದ ಸುಮಾರು ₹50 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಚೀಲ ಕೆರೆಯಲ್ಲಿ ಮುಳುಗಿತ್ತು. ಇದರಿಂದ ಆತಂಕಗೊಂಡ ಮಾಲೀಕ ಏನು ಮಾಡಬೇಕು ಎಂದು ತಿಳಿಯದೇ ಮಂಕಾಗಿ ಕುಳಿತ್ತಿದ್ದರು.
ಬಳಿಕ ಈಶ್ವರ್ ಮಲ್ಪೆ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಈಜುಗಾರ ಈಶ್ವರ್ ಮಲ್ಪೆ ಹಾಗೂ ಅವರ ತಂಡ ಮಾಹಿತಿ ಪಡೆದು ಚಿನ್ನ ಹುಡುಕಾಟಕ್ಕೆ ಇಳಿದರು.
ಚಿನ್ನದ ಮಾಲೀಕನ ಮಾಹಿತಿಯಂತೆ ಕಾರು ಬಿದ್ದ ಜಾಗದಲ್ಲಿ ಹುಡುಕಾಟ ನಡೆಸಿದ್ದಾರೆ, ಕೇವಲ 15 ನಿಮಿಷದಲ್ಲಿ ಕೆರೆಯ ಆಳಕ್ಕೆ ಹೋಗಿ ಚಿನ್ನಾಭರಣಗಳಿದ್ದ ಚೀಲವನ್ನು ಯಶಸ್ವಿಯಾಗಿ ನೀರಿನಿಂದ ಮೇಲಕ್ಕೆತ್ತಿದರು.
ಈ ಬಗ್ಗೆ ಮಾತನಾಡಿದ ಅವರು, ಚಿನ್ನಾಭರಣವಿದ್ದ ಚೀಲ ಕೆಸರಿನಲ್ಲಿ ಹೂತು ಹೋಗಿತ್ತು. ಎಲ್ಲೆಡೆ ಕತ್ತಲೆ ಆವರಿಸಿದ್ದರಿಂದ ಕಣ್ಣಿಗೆ ಏನೂ ಕಾಣುತ್ತಿರಲಿಲ್ಲ. ಸುಮಾರು 20 ಅಡಿಗಳ ಆಳಕ್ಕೆ ಮುಳುಗಿ ಹುಡುಕಿದ ಬಳಿಕ ಚೀಲ ಕೈಗೆ ಸಿಕ್ಕಿತು. ದೇವರ ಅನುಗ್ರಹ ಮತ್ತು ಜನರ ಆಶೀರ್ವಾದದಿಂದಲೇ ಚಿನ್ನಾಭರಣವನ್ನು ಮತ್ತೆ ಪತ್ತೆಹಚ್ಚಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.














