
ವಿಷ್ಣುವರ್ಧನ್ ಹಾಗೂ ಸುದೀಪ್ ಅಭಿಮಾನಿಗಳಿಂದ ತಯಾರಾಗುತ್ತಿರುವ ನೂತನ ಸ್ಮಾರಕದ ನೀಲನಕ್ಷೆ ಬಿಡುಗಡೆಯಾಗಿದೆ.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಧ್ವಂಸವಾದ ಬಳಿಕ ಬೇಸರಗೊಂಡಿದ್ದ ಅಭಿಮಾನಿಗಳು ಪರ್ಯಾಯ ಸ್ಮಾರಕ ನಿರ್ಮಾಣ ಮಾಡಿಕೊಳ್ಳುವುದಾಗಿ ಸವಾಲು ಹಾಕಿದ್ದರು. ವಿಷ್ಣುವರ್ಧನ್ ಅಭಿಮಾನಿಗಳೊಂದಿಗೆ ವಿಷ್ಣುಸೇನೆ ಹಾಗೂ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಜೊತೆ ನಟ ಸುದೀಪ್ ಕೈ ಜೋಡಿಸಿ ಹೊಸ ಸ್ಮಾರಕ ಘೋಷಿಸಿದ್ದರು. ಅದರಂತೆ ಕೆಂಗೇರಿ ಬಳಿಯಲ್ಲೇ ಎರಡು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ನಯಾ ಸ್ಮಾರಕದ ನೀಲನಕ್ಷೆ ಲೋಕಾರ್ಪಣೆ ಮಾಡಲಾಗಿದೆ.
ವಿಷ್ಣುವರ್ಧನ್ 75ನೇ ಜಯಂತೋತ್ಸವನ್ನು ವಿಷ್ಣುಸೇನೆ ಬೃಹತ್ ಮಟ್ಟದಲ್ಲಿ ಮಾಡಲು ತಯಾರಿ ಮಾಡಿಕೊಂಡಿತ್ತು. ಅಭಿಮಾನ್ ಸ್ಟುಡಿಯೋ ಜಾಗ ಗಲಾಟೆಯಿದ ಬೇಸರಗೊಂಡ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಕೊಡುವ ಜಾಗಕ್ಕಾಗಿ ಕಾಯದೇ ತಾವೇ ನಿರ್ಮಿಸಲು ಮುಂದಾಗಿದ್ದಾರೆ.
ಈ ಜಾಗವನ್ನು ಕಿಚ್ಚ ಸುದೀಪ್ ಮುಂದಾಳತ್ವದಲ್ಲಿ ಖರೀದಿಸಿ ಕೊಡಲಾಗಿದೆ. ಈ ಜಾಗಕ್ಕೆ ಡಾ.ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ ಎಂದು ಹೆಸರಿಡಲು ಯೋಜನೆಯಾಗಿದ್ದು ಮುಂದಿನ ವರ್ಷದ ವಿಷ್ಣುವರ್ಧನ್ ಜನ್ಮದಿನದ ಒಳಗಾಗಿ ಯೋಜನೆ ಪೂರ್ಣಗೊಳಿಸುವ ಪ್ಲ್ಯಾನ್ ಹಾಕಲಾಗಿದೆ.
ವಿಷ್ಣುವರ್ಧನ್ ಪ್ರತಿಮೆಯನ್ನೊಳಗೊಂಡ ಸ್ಮಾರಕದಲ್ಲಿ ಚಿತ್ರಗಳ ನೆನಪು ಹಾಗೂ ಕೆಲವು ವಸ್ತುಗಳನ್ನ ಇಟ್ಟು ಅಭಿಮಾನಿಗಳ ದರ್ಶನಕ್ಕೆ ಸದಾ ನೆರವಾಗುವಂತೆ ರೂಪುರೇಷೆ ಸಿದ್ಧ ಮಾಡಲಾಗಿದೆ. ಇದು ದೇಶದಲ್ಲೇ ಅಭಿಮಾನಕ್ಕಾಗಿ ಅಭಿಮಾನಿಗಳು ಕಟ್ಟಿಸಲಿರುವ ಮೊಟ್ಟಮೊದಲ ಬೃಹತ್ ಸ್ಮಾರಕ ಎಂದು ವಿಷ್ಣುಸೇನೆ ಘೋಷಿಸಿಕೊಂಡಿದೆ.














